27/04/2017
ಕಾರ್ಮಿಕ ಇಲಾಖೆಯಲ್ಲಿ ನೋಂದಣಿಯಾಗದ ಜಿವಿಕೆ!
29 Mar, 2016
ಬೆಂಗಳೂರು: ಗುತ್ತಿಗೆ ನಿಯಂತ್ರಣ ಕಾಯ್ದೆ ಉಲ್ಲಂಘಿಸಿ ‘ಕರ್ನಾಟಕ ರಾಜ್ಯ ಆರೋಗ್ಯ ಕವಚ 108’ ಆಂಬುಲೆನ್ಸ್ ಸೇವೆಯ ಗುತ್ತಿಗೆಯನ್ನು ಹೈದರಾಬಾದ್ ಮೂಲದ ಜಿವಿಕೆ ಸಂಸ್ಥೆಗೆ ನೀಡಲಾಗಿದೆ ಎಂಬ ಅಂಶವನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ದಾಖಲೆ ಬಹಿರಂಗಪಡಿಸಿದೆ.
‘1971ರ ಗುತ್ತಿಗೆ ಪದ್ಧತಿ ಮತ್ತು ನಿಯಂತ್ರಣ ಕಾಯ್ದೆಯ ಪ್ರಕಾರ ಕಾರ್ಮಿಕ ಇಲಾಖೆಯಲ್ಲಿ ನೋಂದಣಿಯಾದ ಸಂಸ್ಥೆಗೆ ಮಾತ್ರ ಗುತ್ತಿಗೆ ನೀಡಬೇಕು. ಆದರೆ, ಜಿವಿಕೆ ಸಂಸ್ಥೆ ಕಾರ್ಮಿಕ ಕಾಯ್ದೆಯಡಿ ಗುತ್ತಿಗೆ ಪರವಾನಗಿ ಪಡೆದಿಲ್ಲ’ ಎಂದು ಸಹಾಯಕ ಕಾರ್ಮಿಕ ಆಯುಕ್ತ ಕೆ.ಎಲ್. ರವಿಕುಮಾರ್ ದೃಢಪಡಿಸಿದ್ದಾರೆ. ಬಾಗಲಕೋಟೆ ಜಿಲ್ಲೆ ಕಿರೇಸೂರು ವಕೀಲ ಕೆ.ಎಂ.ಕಪಲಿ ಅವರು ಮಾಹಿತಿ ಹಕ್ಕಿನ ಮೂಲಕ ದಾಖಲೆಗಳನ್ನು ಪಡೆದುಕೊಂಡಿದ್ದಾರೆ.
‘15 ರಾಜ್ಯಗಳಲ್ಲಿ ಆರೋಗ್ಯ ಕವಚ ಯೋಜನೆಯ ಗುತ್ತಿಗೆ ಪಡೆದಿರುವ ಜಿವಿಕೆ ಸಂಸ್ಥೆ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲೂ ಕಾರ್ಮಿಕ ಇಲಾಖೆಯಡಿ ನೋಂದಣಿಯಾಗಿಲ್ಲ’ ಎಂದು ಸಿಪಿಐಎಂ ರಾಜ್ಯ ಸಮಿತಿ ಉಪಾಧ್ಯಕ್ಷೆ ಎಸ್. ವರಲಕ್ಷ್ಮಿ ಆರೋಪಿಸುತ್ತಾರೆ.
ಸೊಸೈಟಿ ಕಾಯ್ದೆಯಡಿ ಸಂಸ್ಥೆ ನೋಂದಣಿಯಾಗಿದೆ ಎಂದು ಜಿವಿಕೆ ಮುಖ್ಯಸ್ಥರು ಹೇಳುತ್ತಿದ್ದಾರೆ. ಆದರೆ, ಇದು ಸೇವಾ ಸಂಸ್ಥೆಯಲ್ಲ. ಕಾರ್ಮಿಕರನ್ನು ಗುತ್ತಿಗೆ ಆಧಾರದಲ್ಲಿ ದುಡಿಸಿಕೊಳ್ಳುವ ಸಂಸ್ಥೆ ಕಾರ್ಮಿಕ ಇಲಾಖೆಯಡಿ ನೋಂದಣಿಯಾಗಬೇಕು ಎಂದು ಅವರು ವಿವರಿಸಿದರು.
ಕಾರ್ಮಿಕ ಕಾನೂನಿನ ಪ್ರಕಾರ ಕೆಲಸದ ಅವಧಿ ಎಂಟು ಗಂಟೆ. ಆದರೆ, ಕಡ್ಡಾಯವಾಗಿ ನಾಲ್ಕು ಗಂಟೆ ಹೆಚ್ಚು ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ. ಈ ಅವಧಿಯನ್ನು ಹೆಚ್ಚುವರಿ ಅವಧಿ ಎಂದು ಪರಿಗಣಿಸಿಲ್ಲ. ಒಪ್ಪಂದಕ್ಕಿಂತ ಕಡಿಮೆ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿದ್ದಾರೆ. ಆದರೆ, ಸರ್ಕಾರ ಒಪ್ಪಂದದ ಪ್ರಕಾರವೇ ವರ್ಷಕ್ಕೆ ₹110 ಕೋಟಿ ಹಣ ಬಿಡುಗಡೆ ಮಾಡುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ವಜಾ ಶಿಕ್ಷೆ: ಎರಡು ತಿಂಗಳಿಂದ ಪ್ರತಿಭಟನೆ ನಡೆಸುತ್ತಿರುವ ಸಿಬ್ಬಂದಿಯ ಬೇಡಿಕೆ ಈಡೇರಿಸುವ ಬದಲು ಮತ್ತೆ 100 ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಲಾಗಿದೆ. ಎರಡು ತಿಂಗಳಲ್ಲಿ ವಜಾಗೊಂಡವರ ಸಂಖ್ಯೆ 253ಕ್ಕೆ ಏರಿದೆ ಎಂದರು.
‘ವಜಾಗೊಂಡವರನ್ನು ಮತ್ತೆ ಕೆಲಸಕ್ಕೆ ನೇಮಿಸಿಕೊಳ್ಳಬೇಕು. ಜಿವಿಕೆ ಸಂಸ್ಥೆ ಈ ಪ್ರಕರಣವನ್ನು ನಿಭಾಯಿಸುವಲ್ಲಿ ಸರಿಯಾಗಿ ನಡೆದುಕೊಳ್ಳುತ್ತಿಲ್ಲ. ಹಾಗಾಗಿ ಜಿವಿಕೆಗೆ ನೀಡಿರುವ ಗುತ್ತಿಗೆಯನ್ನು ವಾಪಾಸ್ ಪಡೆದು ಆರೋಗ್ಯ ಇಲಾಖೆಯೇ ನಿರ್ವಹಿಸಬೇಕು’ ಎಂದು ಅವರು ಒತ್ತಾಯಿಸಿದರು.
ಷರತ್ತು ಉಲ್ಲಂಘನೆ: ರಾಜ್ಯ ಸರ್ಕಾರದೊಂದಿಗೆ ಮಾಡಿಕೊಂಡ ಒಪ್ಪಂದದ ಷರತ್ತುಗಳನ್ನು ಕೂಡಾ ಸಂಸ್ಥೆ ಗಾಳಿಗೆ ತೂರಿದೆ ಎಂದು ವಜಾಗೊಂಡಿರುವ ಸಿಬ್ಬಂದಿ ಅಶೋಕ್ ಆರೋಪಿಸಿದರು. ನಿಯಮದ ಪ್ರಕಾರ 2 ಆಂಬುಲೆನ್ಸ್ ಗೆ ಇಬ್ಬರು ಚಾಲಕರು ಎಂಟು ನರ್ಸ್ಗಳು ಇರಬೇಕು. ಇಬ್ಬರು ಹೆಚ್ಚುವರಿ ಸಿಬ್ಬಂದಿ ಇರಬೇಕು. ಆದರೆ, ಕೆಲ ಜಿಲ್ಲೆಗಳಲ್ಲಿ ಒಂದು ಆಂಬುಲೆನ್ಸ್ ನಲ್ಲಿ ಕೇವಲ ಇಬ್ಬರು ಸಿಬ್ಬಂದಿ ವಿಶ್ರಾಂತಿ ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಬೆಂಗಳೂರು ನಗರದಲ್ಲಿ ಒಂದೊಂದು ಆಂಬುಲೆನ್ಸ್ ದಿನಕ್ಕೆ ಕನಿಷ್ಠ ಏಳರಿಂದ ಎಂಟು ಪ್ರಕರಣಗಳನ್ನು ನಿಭಾಯಿಸುತ್ತಿದೆ. ಕೆಲವು ಜಿಲ್ಲೆಗಳಲ್ಲಿ ದಿನಕ್ಕೆ ಒಂದೆರಡು ಪ್ರಕರಣಗಳಷ್ಟೇ ದಾಖಲಾಗುತ್ತಿವೆ. ಆದರೆ, ಜಿಲ್ಲೆಗಳ ಲೆಕ್ಕವನ್ನು ಮಾತ್ರ ಪರಿಗಣಿಸಿ ಸಿಬ್ಬಂದಿ ನೇಮಕಕ್ಕೆ ಸಂಸ್ಥೆ ಹಿಂದೇಟು ಹಾಕುತ್ತಿದೆ ಎಂದು ದೂರಿದರು.
ಸರ್ಕಾರದಿಂದ ಹಣ ಬಿಡುಗಡೆ: ಹೆಚ್ಚುವರಿ ಅವಧಿ ಕೆಲಸಕ್ಕೆ ವೇತನ ನೀಡಬೇಕು ಎಂದು 2013ರಲ್ಲಿ ಹೈಕೋರ್ಟ್ ಕೂಡಾ ನಿರ್ದೇಶನ ನೀಡಿತ್ತು. ಕೋರ್ಟ್ನ ಆದೇಶವನ್ನೂ ಸಂಸ್ಥೆ ಪಾಲಿಸಿಲ್ಲ. 2016 ಜನವರಿಯಲ್ಲಿ ಪ್ರತಿಭಟನಾಕಾರರು ವಿಧಾನಸೌಧ ಚಲೋ ಚಳವಳಿ ಮಾಡಿದ ನಂತರ ಸರ್ಕಾರ ₹6.5ಕೋಟಿ ಬಿಡುಗಡೆ ಮಾಡಿದೆ. ಆದರೆ, ಸಂಸ್ಥೆ ಆ ಹಣವನ್ನೂ ಸಿಬ್ಬಂದಿಗೆ ನೀಡಿಲ್ಲ.
‘ಸಂಸ್ಥೆಯ ನಿಯಮಕ್ಕೆ ಬದ್ಧರಾಗಿರುತ್ತೇವೆ. ಮುಂದೆ ಪ್ರತಿಭಟನೆ ಮಾಡುವುದಿಲ್ಲ’ ಎಂದು ವೈಯಕ್ತಿಕ ಮುಚ್ಚಳಿಕೆ ಬರೆದುಕೊಟ್ಟ ಸಿಬ್ಬಂದಿಗೆ ಮಾತ್ರ ವೇತನ ಹೆಚ್ಚಳ ಮಾಡುವುದಾಗಿ ಸಂಸ್ಥೆ ಹೇಳುತ್ತಿದೆ ಎಂದು ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.
ಸಚಿವರೇ ಒಪ್ಪಿಕೊಂಡಿದ್ದರು
ಇಡೀ ಯೋಜನೆಯ ನಿರ್ವಹಣೆ ಜಿವಿಕೆ ಸಂಸ್ಥೆಯ ಜವಾಬ್ದಾರಿ. ಹಾಗಾಗಿ ಕಾರ್ಮಿಕರ ಬೇಡಿಕೆ ಈಡೇರಿಸಲು ಸರ್ಕಾರ ಮಧ್ಯಪ್ರವೇಶ ಮಾಡುವಂತಿಲ್ಲ ಎಂದು ಆರೋಗ್ಯ ಇಲಾಖೆ ಮೊದಲು ಹೇಳಿತ್ತು. ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ಸಂಸ್ಥೆಗೆ ಷೋಕಾಸ್ ನೋಟಿಸ್ ಜಾರಿ ಮಾಡಲಾಗಿತ್ತು. ಅಲ್ಲದೇ ಸರ್ಕಾರದೊಂದಿಗೆ ಮಾಡಿಕೊಂಡ ಒಪ್ಪಂದದ ಷರತ್ತುಗಳನ್ನು ಸಂಸ್ಥೆ ಉಲ್ಲಂ ಘಿಸಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಅವರೇ ಒಪ್ಪಿಕೊಂಡಿದ್ದರು.
***
ಜಿವಿಕೆ ಸಂಸ್ಥೆ ಸೊಸೈಟಿ ಕಾಯ್ದೆಯಡಿ ನೋಂದಣಿಯಾಗಿದೆ. ಹಾಗಾಗಿ ಕಾರ್ಮಿಕ ಕಾಯ್ದೆಯಡಿ ನೋಂದಣಿಯಾಗುವ ಅಗತ್ಯವಿಲಲ
- ಅಭಿನವ್ ಜೈರಾಮ್ , ಜಿವಿಕೆ ಸಂಸ್ಥೆಯ ಸಿಇಒ(ಕರ್ನಾಟಕ)
***
ಗುತ್ತಿಗೆ ಕಾರ್ಮಿಕರನ್ನು ನೇಮಿಸಿಕೊಳ್ಳುವ ಯಾವುದೇ ಸಂಸ್ಥೆ ಕಾಯ್ದೆಯ ಪ್ರಕಾರ ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಆಗಲೇಬೇಕು. ಇಲ್ಲದಿದ್ದರೆ ಅದು ಕಾನೂನಿನ ಉಲ್ಲಂಘನೆ
-ಟಿ. ನಾರಾಯಣ ಸ್ವಾಮಿ, ವಕೀಲ