ಶ್ರೀ ಓಂ ಮಂತ್ರ

ಶ್ರೀ ಓಂ ಮಂತ್ರ pooja

ದೈತ್ಯರ ವಿರುದ್ಧ ವಿಜಯ ಸಾಧಿಸಿದ ವಿಜಯದಶಮಿ :-ಶರನ್ನವರಾತ್ರಿಯ ಕೊನೆಯ ದಿನವೇ ವಿಜಯದಶಮಿ. ಆದಿಶಕ್ತಿಯು ಮಹಿಷಾಸುರನ ಸಂಹಾರ ಮಾಡಲು ಯುದ್ಧವನ್ನು  ...
12/10/2024

ದೈತ್ಯರ ವಿರುದ್ಧ ವಿಜಯ ಸಾಧಿಸಿದ ವಿಜಯದಶಮಿ :-

ಶರನ್ನವರಾತ್ರಿಯ ಕೊನೆಯ ದಿನವೇ ವಿಜಯದಶಮಿ. ಆದಿಶಕ್ತಿಯು ಮಹಿಷಾಸುರನ ಸಂಹಾರ ಮಾಡಲು ಯುದ್ಧವನ್ನು ಎಡೆಬಿಡದೆ ಹಲವಾರು
ದಿನಗಳು ಮಾಡಿ ಶುಂಭ -ನಿಶುಂಭ- ರಕ್ತ ಬೀಜಾ ಸುರನಂಥ ದುಷ್ಟರನ್ನೆಲ್ಲ ಸಂಹರಿಸಿ, ಕೊನೆಯಲ್ಲಿ ಅಂದರೆ ಹತ್ತನೇ ದಿನ ಮಹಿಷಾಸುರನನ್ನು ಸಂಹರಿಸಿ ವಿಜಯ ಸಾಧಿಸಿದ ದೇವಿಯ ನೆನಪಿಗಾಗಿ ಈ ಹಬ್ಬವನ್ನು ಮಾಡುತ್ತಾರೆ.
ಸಡಗರ, ಸಂಭ್ರಮದಿಂದ, ಆಚರಿಸುವ ಹಬ್ಬವೇ ವಿಜಯದಶಮಿ. ಇದನ್ನು ದೇಶಾದ್ಯಂತ ಆಚರಿಸುತ್ತಾರೆ. ಇದಕ್ಕೆ ಪುರಾಣ ಕಥೆಗಳ ಹಿನ್ನೆಲೆಯೂ ಇದೆ.

ವಿಜಯದಶಮಿ ದಿನ ಮನೆದೇವರ ಪೂಜೆಗೆ ವಿಶೇಷ ಮಹತ್ವವಿದೆ. ಒಂಬತ್ತು ದಿನಗಳ ಕಾಲವು ದೇವಿಯನ್ನು ಆರಾಧಿಸಿ ಪೂಜಿಸಲಾಗಿದೆ. ಇಂದು ಸಹ ಮುಂಜಾನೆಯೇ, ಸ್ನಾನ ಮಾಡಿ, ಶುಭ್ರ ಬಟ್ಟೆ ಉಟ್ಟು, ನಿತ್ಯ ದೇವರು ಮತ್ತು ವಿಶೇಷವಾಗಿ ಮನೆದೇವರ ಪೂಜೆಯನ್ನು ಮಾಡಿ ಮನೆ ದೇವರಿಗೆ ಮುಡಿಪು ಕಟ್ಟುತ್ತಾರೆ. ವಿಜಯದಶಮಿ ಬಹಳ ಪವಿತ್ರವಾದ ಪುಣ್ಯಕರವಾದ ದಿನ. ಯಾವುದೇ ಶುಭ ಕಾರ್ಯ ಮಾಡುವುದಕ್ಕೆ , ಮುಹೂರ್ತ ನೋಡುವುದೇ ಬೇಡ. ಇಂದು ಮಕ್ಕಳ ಅಕ್ಷರಾಭ್ಯಾಸ, ಹೊಸ ಮನೆ ಗೃಹಪ್ರವೇಶ, ನಾಮಕರಣ, ಯಾವುದೇ ಶುಭ ಕಾರ್ಯ ಮಾಡಲು ಇಂದು ಪ್ರಶಸ್ತವಾದ ದಿನ. ವಿಜಯದಶಮಿಯಂದು ಮನೆ ಮಂದಿಯೆಲ್ಲರೂ, ಮನೆಯ ದೇವರ ಪೂಜೆಯಲ್ಲಿ ಭಾಗಿಯಾಗುತ್ತಾರೆ. ನೈವೇದ್ಯ, ಮಂಗಳಾರತಿ ನಮಸ್ಕಾರದ ನಂತರ ಎಲ್ಲರೂ ಕೈಜೋಡಿಸಿ ದೇವರನ್ನು ಪ್ರಾರ್ಥಿಸುತ್ತಾರೆ. ( ಅವರವರ ಮನೆದೇವರನ್ನು ಬೇಡಿಕೊಳ್ಳುತ್ತಾರೆ) ತಿರುಪತಿ, ತಿಮ್ಮಪ್ಪ , ಬಂಗಾರ ಗಿರಿವಾಸ, ವೆಂಕಟರಮಣ ಸ್ವಾಮಿ ನನ್ನಿಂದ ಗೊತ್ತಿದ್ದೋ ಗೊತ್ತಿಲ್ಲದೆಯೋ, ತಪ್ಪಾಗಿದ್ದರೆ ಕ್ಷಮಿಸಿಬಿಡು, ಇಂದಿನಿಂದ ಅಂತ ತಪ್ಪುಗಳನ್ನು ಸರ್ವತಾ ಮಾಡುವುದಿಲ್ಲ. ಇನ್ನು ಮುಂದೆ ಯಾವುದೇ ತಪ್ಪು ಆಗದಂತೆ ನೀನೆ ನಮ್ಮನ್ನು ರಕ್ಷಿಸಿ, ಸಲಹ ಬೇಕು. ವಿದ್ಯಾ, ಬುದ್ಧಿ, ಜ್ಞಾನ, ಆಯುರಾರೋಗ್ಯಾದಿಗಳನ್ನು ಕೊಟ್ಟು ಕಾಪಾಡು ಭಗವಂತ ಎಂದು ಹೇಳಿಕೊಟ್ಟ ಹಾಗೆ, ಹೇಳುವಾಗ ಎಲ್ಲರ ಕಣ್ಣಲ್ಲೂ ನೀರು ಬರುತ್ತಿತ್ತು. ಮುಡಿಪೆಂದು ದೇವರಿಗೆ ಹಣ ಹಾಕಿ ಕಟ್ಟಿಟ್ಟ ಗಂಟನ್ನು ( ಹೆಚ್ಚು ಕಡಿಮೆ ನಾಲಕ್ಕಾಣೆ ಯಿಂದ ಹಿಡಿದು ಒಂದು ಕಾಲು ರೂಪಾಯಿ, 11ರೂ 25 ಪೈಸೆ ತನಕ) ಹಾಕಿ ಕಟ್ಟಿದ ಗಂಟನ್ನೇ ತಿಮ್ಮಪ್ಪನಿಗೆ ಮುಡಿಪಿಟ್ಟ ಗಂಟು ಎನ್ನುತ್ತಿದ್ದರು. ಆಶ್ಚರ್ಯ ಎಂದರೆ ಬಂಗಾರದ ನಾಣ್ಯ ಗಳನ್ನೆ ಹಾಕಿ ಕಟ್ಟಿದ ಗಂಟು ಎಂಬ ಭಾವ ಎಲ್ಲರಲ್ಲೂ ಇತ್ತು. ದೇವರಿಗೆ ಕಟ್ಟಿಟ್ಟ ಮುಡಿಪನ್ನು ಮನೆಯಲ್ಲಿ ಯಾರಾದರೂ ಕ್ಷೇತ್ರಕ್ಕೆ ಹೋದರೆ, ಅಥವಾ ಹೋಗುವವರಿದ್ದರೆ ಅಲ್ಲಿ ತನಕ ಹಾಕುತ್ತಿದ್ದ ತಪ್ಪು ಕಾಣಿಕೆ, ಹರಕೆ ಕಾಣಿಕೆ, ಎಲ್ಲವನ್ನೂ ಸೇರಿಸಿ ಕ 51 ಅಥವಾ 108, ಹೀಗೆ ಕಳಿಸುತ್ತಿದ್ದರು. ಇಷ್ಟು ಸಂಭ್ರಮದ ವಿಜಯದಶಮಿ ಹಬ್ಬ ತಿರುಪತಿಯಲ್ಲಿಯೇ ಇದ್ದಂತ ಅನುಭವ ಆಗುತ್ತಿತ್ತು.

ಇಳಿ ಹೊತ್ತು 4:00 ಗಂಟೆ ನಂತರ. ಕೈ ಕಾಲು ಮುಖ ತೊಳೆದು, ಒಳ್ಳೆ ಬಟ್ಟೆ ಹಾಕಿಕೊಂಡು ಸರಸ್ವತಿ ಹಾಗೂ ಗೊಂಬೆ ಪಟದ ಮುಂದೆ ದೀಪ ಹಚ್ಚಿ. ಎಲ್ಲರೂ ಕುಳಿತು, ಹಿರಿಯರು ಹೇಳಿಕೊಟ್ಟಂತೆ, ತಾಯಿ ಶೃಂಗೇರಿ ಶಾರದಾಂಬೆ ದೇವಿಗೆ, ಪತ್ರ ಬರೆಯುವ ಸಂಭ್ರಮ. ವಿಳಾಸ ಬರೆದು, ಅರಿಶಿಣ ಕುಂಕುಮ ಹೂವು ಏರಿಸಿ ಸರಸ್ವತಿ ಮುಂದೆ ಇಟ್ಟು . ಆರತಿ ಮಾಡಿ ನಮಸ್ಕರಿಸಿ, ಹಿರಿಯರಿಗೆಲ್ಲಾ ಶಮಿಪತ್ರೆ ಕೊಟ್ಟು ಈ ಪತ್ರೆಯನ್ನು ಬನ್ನಿ ಬಂಗಾರ ಎಂದು ಕರೆಯು ತ್ತಾರೆ. ಇದನ್ನು ಕೊಟ್ಟು ನಿಮ್ಮ ಬಾಳು ಬಂಗಾರವಾಗಲಿ ಎಂದು ಹೇಳುತ್ತಾರೆ. " ಶಮಿ ಶಮಯತೇ ಪಾಪಂ ಶಮೀ ಶತ್ರು ವಿನಾಶಿನೀ, ಅರ್ಜುನಸ್ಯ ಧನುರ್ಧಾ ರಿ ರಾಮಸ್ಯ ಪ್ರಿಯದರ್ಶಿನೀ" ಈ ಶ್ಲೋಕವನ್ನು ಹೇಳಿ ನಮಸ್ಕರಿಸಬೇಕು, ಆಗ ಹಿರಿಯರು, " ಶತಾಯುರ್ವಜ್ರ ದೇಹಾಯ ಸರ್ವ ಸಂಪತ್ಕ ರಾಯ ಚ ಸರ್ವಾರಿಷ್ಟ ವಿನಾಶಾಯ ನಿಂಬಕಂದಲಭಕ್ಷಣಮ್" ( ಈ ಶ್ಲೋಕವನ್ನು ಯುಗಾದಿ ಹಬ್ಬದಂದು ಬೇವು ಬೆಲ್ಲ ಕೊಡುವಾಗಲು ಹೇಳುತ್ತಾರೆ) ಎಂದು ಹೇಳಿ ನಾವು ಕೊಟ್ಟ ಶಮೀಪತ್ರೆಯಲ್ಲಿ ಸ್ವಲ್ಪ ಪ್ರಸಾದ ರೂಪದಲ್ಲಿ ಕೊಡು ತ್ತಾರೆ. ಅಂದು ಸರಸ್ವತಿ ಮತ್ತು ಗೊಂಬೆ ಪಟವನ್ನು ಕದಲಿಸುತ್ತಾರೆ. ನಂತರ ಊರಿನಲ್ಲಿರುವ ಎಲ್ಲರ ಮನೆಗಳಿಗೂ ಹೋಗಿ ಶಮಿ ಪತ್ರೆ ಕೊಟ್ಟು ಹಿರಿಯರಿಗೆ ನಮಸ್ಕರಿಸಿ ಬರಬೇಕು. ಒಂದೂ ಮನೆಯನ್ನು ಬಿಡದೆ ಎಲ್ಲರ ಮನೆಗೂ ಹೋಗಿ ಬರುತ್ತಿದ್ದೆವು. ನಾವು ಅವರಗಳ ಮನೆಗೆ ಹೋಗದಿದ್ದರೆ ಅಥವಾ ಯಾರಾದರೂ ನಮ್ಮ ಮನೆಗೆ ಬರದಿದ್ದರೆ, ಮನಸಲ್ಲಿ ಕಸಿ ವಿಸಿ ಆಗುತ್ತಿತ್ತು.

ಊರು ಮನೆ ಬಾಗಿಲು ಅಂದಮೇಲೆ, ಯಾವುದಾದರೂ ಸಂದರ್ಭದಲ್ಲಿ ಸಣ್ಣಪುಟ್ಟ ಕಾರಣಗಳಿಗೆ ಸ್ವಲ್ಪ ಬೇಸರವಾಗಿರುತ್ತದೆಯೋ ಏನು ಗೊತ್ತಿರಲ್ಲ. ಇಂತಹ ಹಬ್ಬ ಹರಿದಿನಗಳಂದು, ಮನೆಗಳಿಗೆ ಹೋಗಿ ಮಾತನಾಡಿಸಿ, ಶಮಿ ಪತ್ರೆ ಕೊಡುವುದು, ಸಂಕ್ರಾಂತಿಯಂದು ಎಳ್ಳು ಬೆಲ್ಲ ಬೀರುವುದು ಇದರಿಂದ ಸಣ್ಣ ಪುಟ್ಟ ಮನಸ್ತಾಪಗಳು ಕರಗಿ ಸ್ನೇಹ ಸಂಬಂಧ ಉಳಿಯುತ್ತಿತ್ತು. ಇದನ್ನೆ ಲ್ಲ ಹಿಂದಿನವರು ಊರಿನವರ ಒಗ್ಗಟ್ಟಿಗಾಗಿ ಕಂಡುಕೊಂಡು ಉಪಾಯಗಳು. ಹೀಗೆ ಆಚರಿಸಿದ ನವರಾತ್ರಿ ಹಬ್ಬದ ಸಂಭ್ರಮ, ಎಂದಿಗೂ ಮರೆಯದೆ ಉಳಿದುಬಿಟ್ಟಿದೆ. ವಿಜಯದಶಮಿ ಒಂದು ತರಹ ಊರ ಹಬ್ಬವು ಹೌದು, ತಾಲೂಕು, ಜಿಲ್ಲೆಗಳಂಥ ಊರಿನಲ್ಲಿ ಈ ಆಚರಣೆಗಾಗಿ ದೊಡ್ಡ ಮೈದಾನವನ್ನು ಆಯ್ದುಕೊಂಡು, ಎಲ್ಲಾ ಸೇರಿ ಆಚರಿಸುತ್ತಾರೆ.‌

ವಿಜಯ ದಶಮಿಯ ಆಚರಣೆಗೆ ಪೌರಾಣಿಕ ಹಿನ್ನೆಲೆಯಂತೆ , ತ್ರೇತಾಯುಗ ದಲ್ಲಿ ರಾವಣನಿಂದ ಸೀತೆಯನ್ನು ಬಿಡಿಸಿಕೊಂಡು ಬರಲು ಶ್ರೀರಾಮನು, ಲಕ್ಷ್ಮಣ ಸಮೇತ, ವಾನರ ಸೇನೆಯೊಂದಿಗೆ ರಾವಣನ ಮೇಲೆ ಯುದ್ಧ ಮಾಡುತ್ತಾನೆ. ವಿಜಯದಶಮಿ ದಿನದಂದು ರಾವಣನನ್ನು ಸಂಹಾರ ಮಾಡುತ್ತಾರೆ, ದುಷ್ಟರ ಮೇಲೆ ವಿಜಯ ಸಾಧಿಸಿದ ದಿನ ಎಂಬ ಸಂಕೇತವಾಗಿ ರಾವಣನ ಪ್ರತಿ ಕೃತಿಯನ್ನು ದಹನ ಮಾಡಿ ಸಂಭ್ರಮ ಪಡುತ್ತಾರೆ. ದಶಕಂಠನ 10 ತಲೆಗಳನ್ನು ಸಂಹರಿಸಿದ ದಿನವನ್ನು 'ದಶ ಹರ' ಎಂದು ಕರೆದರು. ಅದೇ ಮುಂದೆ ಜನರ ಬಾಯಲ್ಲಿ 'ದಸರಾ' ಎಂದು ಆಯಿತು ಎಂದು ಹೇಳುತ್ತಾರೆ.

ದ್ವಾಪರಯುಗದಲ್ಲಿ ಪಾಂಡವರು ಕೌರವರ ಮೋಸದ ದ್ಯೂತದಲ್ಲಿ ಸೋತು, ಷರತ್ತಿನಂತೆ 12 ವರ್ಷ ವನವಾಸ, ಒಂದು ವರ್ಷ ಅಜ್ಞಾತವಾಸಕ್ಕೆ ಹೋಗುವ ಮೊದಲು ತಮ್ಮ ಆಯುಧಗಳನ್ನೆಲ್ಲಾ ಶಮಿ ವೃಕ್ಷದಲ್ಲಿ ಇಟ್ಟು ಕಾಪಾಡುವಂತೆ ಪ್ರಾರ್ಥಿಸಿ ಹೋಗಿದ್ದರು. ಅದು ಯಾರು ಕಣ್ಣಿಗೂ ಬೀಳದಂತೆ ಶಮಿ ವೃಕ್ಷದೇವಿ ಕಾಪಾಡಿದ್ದಳು. ಅವರ ವನವಾಸ ಮುಗಿದು, ಹಸ್ತಿನಾಪುರದಲ್ಲಿ ತಮ್ಮ ರಾಜ್ಯವನ್ನು ಕೊಡುವಂತೆ ಕೇಳುವ ಸಮಯಕ್ಕೂ, ಇದಕ್ಕೆ ಮುನ್ನುಡಿಯಂತೆ, ವಿರಾಟನ ಗೋಗ್ರಹಣಕ್ಕೆ ಪ್ರತಿಯಾಗಿ ಯುದ್ಧ ನಡೆದು ಪಾಂಡವರು ವಿಜಯ ಸಾಧಿಸಿದರು. ಆ ಯುದ್ಧ ನಡೆದದ್ದು ವಿಜಯದಶಮಿಯ ದಿನ ಆಗಿತ್ತು. ಈ ಸಂತೋಷಕ್ಕಾಗಿ ವಿಜಯದಶಮಿ ಆಚರಿಸಿದರು. ವಿಜಯದಶಮಿಯ 'ಶಮಿ ಪತ್ರೆ' ಅಥವಾ 'ಬನ್ನಿ' ಎಂದು ಕರೆಯುವ ಈ ಮರ ಅತ್ಯಂತ ಶ್ರೇಷ್ಠ ವೃಕ್ಷಗಳಾದ ಅರಳಿ, ಅತ್ತಿ, ಪಾರಿಜಾತ, ತೆಂಗು, ಇಂಥ ಕೆಲವು ಪವಿತ್ರವಾದ ವೃಕ್ಷಗಳ ಸಾಲಿಗೆ ಶಮಿವೃಕ್ಷ ಸೇರುತ್ತದೆ. ಈ ವೃಕ್ಷದ ಮಹತ್ವದ ಕುರಿತು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಕೃತಯುಗದಲ್ಲಿ ದೇವ ದಾನವರು ಕ್ಷೀರಸಾಗರವನ್ನು ಕಡೆದಾಗ ಬಂದಂಥ ಪವಿತ್ರ ವಸ್ತುಗಳಲ್ಲಿ ಪಾರಿಜಾತ ,ತುಳಸಿ, ಬೋಧಿ ವೃಕ್ಷ ಗಳಂತೆ 'ಶಮಿ' ವೃಕ್ಷ ಬಂದಿತು. ಇದರಲ್ಲಿ ಅಗ್ನಿಯ ಸನ್ನಿಧಾನವಿದೆ. ಇದು ಬಹಳ ಗಟ್ಟಿಯಾಗಿದ್ದು ಪರಾಶಕ್ತಿಯ ಪ್ರತಿರೂಪವೆಂದು ಪೂಜಿಸುತ್ತಾರೆ.
ಇದರ ಎಲೆ ತೊಗಟೆ ಕಾಂಡ ಎಲ್ಲವನ್ನು ಔಷಧಿಯಾಗಿ ಬಳಸುತ್ತಾರೆ. ಎಂಥಾ ಕಾರ್ಕೋಟಕ ವಿಷವನ್ನು ತೆಗೆಯುವ ಶಕ್ತಿ ಇದಕ್ಕಿದೆ ಎಂದು ಹೇಳುತ್ತಾರೆ. ಆಯುರ್ವೇದದಲ್ಲಿ ಹೆಚ್ಚು ಬಳಕೆಯಲ್ಲಿದೆ. ವಿಜಯದಶಮಿಯ ಸಮಯದಲ್ಲಿ ಶಮಿಪತ್ರೆಯನ್ನು ಊರಾಚೆ ಇರುವ ಮರದ ಹತ್ತಿರ ಹೋಗಿ ಮರಕ್ಕೆ ಪೂಜೆ ಮಾಡಿ ಬನ್ನಿ ಟೊಂಗೆಗಳನ್ನು ತಂದು ಕೇಳಿದವರು ಅಷ್ಟಷ್ಟು ಕೊಟ್ಟು, ಮನೆಗೆ ತಂದು ಪೂಜೆ ಗಿಟ್ಟ ಪುಸ್ತಕದ ಮೇಲಿಟ್ಟು ಪೂಜಿಸುವುದರಿಂದ ಮನೆಯಲ್ಲಿ ಶಾಂತಿ, ಸಮಾಧಾನ ಧನ ಧಾನ್ಯ, ಅಭಿವೃದ್ಧಿ ಜೊತೆ, ಹಿಡಿದ ಕಾರ್ಯದಲ್ಲಿ ಜಯ ದೊರೆಯುತ್ತದೆ. ಎಂಬ ನಂಬಿಕೆ ಜನಮನಗಳಲ್ಲಿ ಹಾಸು ಹೊಕ್ಕಾಗಿದೆ.

ನಮಸ್ತೆ ಪುಂಡರಿಕಾಕ್ಷಾ ನಮಸ್ತೇ ಪುರುಷೋತ್ತಮ !
ನಮಸ್ತೆ ಸರ್ವ ಲೋಕಾತ್ಮನ್ನಮಸ್ತೇ ತಿಗ್ಮ ಚಕ್ರಿಣೇ!
ನಮೋ ಬ್ರಹ್ಮಣ್ಯ ದೇವಾಯ ಗೋ ಬ್ರಾಹ್ಮಣ ಹಿತಾಯ ಚ
ಜಗದ್ಧಿತಾಯ ಕೃಷ್ಣಾಯ ಗೋವಿಂದಾಯ ನಮೋ ನಮಃ!!

ಸಂಕ್ಷಿಪ್ತ ಶ್ರೀದೇವಿ ಮಹಾತ್ಮೆಅಧ್ಯಾಯ 9: ‌                 ಇಂದ್ರಾದಿ ದೇವತೆಗಳಿಂದ ದೇವಿಯ ಸ್ತುತಿ:-!! ಇಂದಿರಾಂ ಮೊದಲಾದವರು ಹರು !!ಷಿಂದ ...
12/10/2024

ಸಂಕ್ಷಿಪ್ತ ಶ್ರೀದೇವಿ ಮಹಾತ್ಮೆಅಧ್ಯಾಯ 9:

ಇಂದ್ರಾದಿ ದೇವತೆಗಳಿಂದ ದೇವಿಯ ಸ್ತುತಿ:-

!! ಇಂದಿರಾಂ ಮೊದಲಾದವರು ಹರು !!
ಷಿಂದ ವೇದಾಂತ ಪ್ರಮಾಣದ !
ಲಂದು ಸ್ತುತಿ ಮಾಡಿದರು ಮಹಾಲಕ್ಷ್ಮೀಯನು ನಲುವಿನಲೀ!!

ಮಹಿಷಾಸುರನ ವಧೆಯಾಯಿತು ಅದನ್ನು ಕಂಡ ದೇವತೆಗಳಿಗೆ ಸಂಭ್ರಮ ಸಂತೋಷಗೊಂಡರು, ದೇವತೆಗಳನ್ನೊಳಗೊಂಡ ಇಂದ್ರನು ಸೇರಿದಂತೆ ಎಲ್ಲರೂ ದೇವಿಯನ್ನು ಸ್ತುತಿಸಿದರು. ಕರಜೋಡಿಸಿ ಆಕೆಗೆ ವಂದಿಸುತ್ತ ' ಕರುಣಾಮಯಿ ! ದೇವಿ ಭಕ್ತಾಧೀನೇ ' ಎಂದು ಇಂದ್ರಾದಿ ದೇವತೆಗಳು ಆಕೆಯನ್ನು ವೇದಮಂತ್ರ ಗಳಿಂದ ಸ್ತುತಿಸಿದರು. ' ಹೇ ತಾಯಿ, ಜಗನ್ಮಾತೆ ನಾವೆಲ್ಲಾ ನಿನ್ನ ಮಕ್ಕಳು ಪ್ರತಿ ಕ್ಷಣದಲ್ಲೂ ಎಲ್ಲರಲ್ಲೂ ಸಂಚಲನ ತರುವ ಶಕ್ತಿ ನೀನೆ ದೇವಿ. ದೇವತೆಗಳು, ಮಾನವರು ಎಲ್ಲ ಜೀವಾತ್ಮರು ನಿನ್ನನ್ನು ಸ್ತುತಿಸು ವರು. ನಿನ್ನ ಪ್ರಕಾಶ ನಮ್ಮೆಲ್ಲರ ಸುತ್ತ ಹಬ್ಬಿದೆ. ನೀನೆ ನಮ್ಮ ತಾಯಿ ತಂದೆ, ಬಂಧು- ಬಳಗ, ನೀನೆ ನಮ್ಮ ಸರ್ವಸ್ವ.

ತಾಯಿ! ಪರಾಶಕ್ತಿ ನಿನ್ನಯ ಪ್ರಕಾಶ ಪ್ರಭೇಯಿಂದಲೇ ಅಗ್ನಿ, ರವಿ, ಶಶಿಗಳೂ ಕಾಂತಿಯುತವಾಗಿ ಕಾಣುವರು. ನಿನ್ನನ್ನು ಜೀವರು ಅನೇಕ ಹೆಸರುಗಳಿಂದ ಗುರುತಿಸುವರು. ದುಷ್ಟರನ್ನು ಶಿಕ್ಷಿಸುವವಳೂ, ಶಿಷ್ಟರನ್ನು ಪೊರೆಯುವವಳೂ, ನೀನೆ ಆಗಿರುವೆ. ಯಾವ ದೇವತೆಯೂ ನಿನ್ನ ಮಹಿಮೆಯನ್ನು ವರ್ಣಿಸಲು
ಅಶಕ್ತನಾಗಿದ್ದಾನೆ . 'ತಾಯಿ! ಮಹಾಲಕ್ಷ್ಮಿ! ನಿನ್ನನ್ನು ಪ್ರತಿನಿತ್ಯ ಯಾರು ಪೂಜಿಸಿ, ಭಜಿಸಿ, ಆಸಕ್ತಿಯಿಂದ ನಿನ್ನ ಸೇವೆಗೈಯ್ಯವನೋ ಅವನು ಪರಮ ಪುಣ್ಯಶಾಲಿ ನಿನ್ನ ಚರಿತ್ರೆಯನ್ನು ಪಠಣ ಮಾಡಿದವರಿಗೂ, ನಿನ್ನ ಸ್ಮರಣೆ ಮಾಡಿದವರಿಗೂ, ನಿನ್ನ ಪಾದದ ಬಳಿ ಸ್ಥಾನ ಖಂಡಿತವಾಗಿಯೂ ದೊರಕುವುದು .ಹೇ ಕರುಣಾ ಶಾಲಿಯೇ ನೀನು ದುಷ್ಟರ ವಂಶವನ್ನೇ ನಿರ್ಮೂಲ ಮಾಡಿ ನಿನ್ನ ಸ್ಮರಣೆ ಮಾಡಿದ ಶಿಷ್ಟರನ್ನು ಕಾಯಲು ಆತುರದಿಂದ ಓಡಿ ಬರುವ ತಾಯೆ, ನಿನ್ನನ್ನು ನಾನು ಹೇಗೆ ಎಷ್ಟು ವಿಧದಿಂದ ವಂದಿಸಬೇಕೋ ತಿಳಿಯದಾಗಿದೆ. ನಿನ್ನ ಕೃಪಾಕಟಾಕ್ಷಕ್ಕೆ ಪಾತ್ರನಾದವನನ್ನು ನೀನು ಸದಾ ಕಾಯುತ್ತಿರುವೆ ನಿನ್ನ ದರುಶನ ಮಾತ್ರದಿಂದ ಪರಮ ಸುಖವು ದೊರೆಯುತ್ತದೆ. ನಿನ್ನ ಶಕ್ತಿಗೆ ಸರಿ ಸಮಾನರಿಲ್ಲ. ಯಾರು ನಿನ್ನನ್ನು ನಿನ್ನ ಭಕ್ತರನ್ನು ನಿಂದಿಸುವರೋ, ಆತನ ನಾಶ ನಿಶ್ಚಿತ. ನಿನ್ನ ಭಕ್ತರಿದ್ದರೆ ನೀನಿರುವೆ, ನಿನಗಿಂತ ಬೇರೆ ಸತ್ಯವಿಲ್ಲ. ತಾಯೇ ನಿನ್ನ ಕೃಪಾ ಪಾತ್ರನಾದವನು, ಸ್ಥಲ, ಜಲ , ಗುಹೆ, ವನ, ಎಲ್ಲೇ ಇರಲಿ ಆತನ ಜೊತೆ ಗಿದ್ದು, ನೀನು ಖಡ್ಗ ಧಾರಿಣಿಯಾಗಿ ರಕ್ಷಿಸುವ ನಿನಗೆ ಯಾವ ಆಸೆಯೂ ಇಲ್ಲ. ಹಾಗೇನಾದರೂ ಇದ್ದರೆ ಭಕ್ತರ ಹಿತ ಮಾತ್ರ.

ಮಧು - ಕೈಟಭರ ಸಂಹಾರ ಮಾಡಲು ಭಗವಾನ್ ಮಹಾವಿಷ್ಣುವಿಗೆ ಸ್ಪೂರ್ತಿಯನ್ನಿತ್ತ ದೇವಿ ನೀನು. ಔದಂಬರ ವೃಕ್ಷದಲ್ಲಿರುವ ಕಾಯಿಗಳಂತೆ ನಿನ್ನಲ್ಲಿ ಬ್ರಹ್ಮಾಂಡವು ಅಂಟಿಕೊಂಡಿದೆ. ತಾಯಿ ನಿನ್ನ ಅಪಾರ ಮಹಿಮೆ ಯನ್ನು ಅರಿತವರಾರು? ಆ ಮಹಿಷನು ನಿನಗೆ ಯಾವ ಸಾಟಿಯೂ ಅಲ್ಲ. ನೀನೆಲ್ಲಿ , ಅವನೆಲ್ಲಿ , ನಿನ್ನನ್ನು ಕಣ್ಣಾರೆ ಕಂಡವರೇ ಧನ್ಯರು, ಮಾನ್ಯರು, ನಿನ್ನ ಮೂಗುತಿಯ ರತ್ನ ಕಾಂತಿ, ಓಲೆಯ ತೇಜಸ್ಸು, ಆಭರಣಗಳ ಸೌಂದರ್ಯ, ಕಾಲಂದಿಗೆಯಲ್ಲಿನ ಗೆಜ್ಜೆಯ ಹಾಗೂ ಸ್ವರ್ಣ ಕಿರೀಟದ ಕಾಂತಿ, ವರ್ಣನಾತೀತ ವಾಗಿದೆ . ತಾಯಿ ನಿನ್ನ ಸ್ಮರಣೆ ಸರ್ವ ಫಲದಾಯಕವಾಗಿದೆ . ನಿನ್ನ ಕೃಪೆಯಿಂದ ಪರಮ ಶತ್ರುಗಳು ಮಿತ್ರರಾಗುತ್ತಾರೆ . ದೇವಿ ನಿನ್ನ ಸ್ಮರಣೆಯೇ ಪರಮಮಂತ್ರ ವಾಗಿದೆ.

ಹೀಗೆ ಇಂದ್ರಾದಿ ದೇವತೆಗಳೆಲ್ಲರೂ ಕೂಡಿ ದೇವಿಯನ್ನು ಸ್ತೋತ್ರ ಮಾಡಿ ಪುಷ್ಪ ಧೂಪ, ದೀಪಗಳಿಂದ ಅರ್ಜಿಸಿದರು. ದೇವತೆಗಳು ಕೈ ಮುಗಿದು ನಿಂತರು. ಆಗ ದೇವಿಯು ಅವರನ್ನು ಕುರಿತು ನಿಮಗೆ ಬೇಕಾದ್ದನ್ನು ಬೇಡಿಕೊಳ್ಳಿ ಎಂದಳು. ದೇವತೆಗಳು ಮತ್ತೆ ಮತ್ತೆ ನಮಸ್ಕರಿಸಿ, ಅಮ್ಮ ಮಹಿಷಾಸುರನು ನಾಶವಾದು ದೇ ನಿನ್ನ ಮಹಿಮೆಯಿಂದ. ನಮಗೆ ಇದೇ ಬೇಕಾದುದು. ನಮಗೆಲ್ಲ ಸುಖ ಸಂಪತ್ತು, ನೆಮ್ಮದಿ, ಸಕಲ ಸಂಪದಗಳನ್ನು ಕೊಡು ಎಂದು ಪ್ರಾರ್ಥಿಸಿದರು.
ದೇವಿಯು ಹಾಗೆ ಆಗಲೆಂದು ನುಡಿದು, ಪಾರ್ವತಿ ರೂಪದಲ್ಲಿ ಲೀನವಾದಳು. ಹೀಗೆ ದೇವಿ ಮಹಿಮೆಯನ್ನು ಹೇಳಿದ ಶಿವನು ನಂದೀಶ್ವರ ನನ್ನು ಕುರಿತು 'ಇದೆ ದೇವಿಯ ಮಹಿಮೆ'. ಎಂದನು. ದೇವತೆಗಳೆಲ್ಲರೂ ದೇವಿಗೆ ಜಯ ಜಯಕಾರ ಮಾಡಿ, ಹರಿ-ಹರ -ಬ್ರಹ್ಮಾದಿಗಳ ಆಜ್ಞೆಯನ್ನು ಪಡೆದು ಮಾತೆಯನ್ನು ನೆನೆದ ರೆಂಬಲ್ಲಿಗೆ ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯ ಶ್ರೀ ಚಿದಾನಂದ ಗುರುವರ ಶಿಷ್ಯ ಶ್ರೀ ಚಿದಾನಂದಾವಧೂತ ವಿರಚಿತ ದೇವಿ ಮಹಾತ್ಮೆಯಲ್ಲಿ. 'ಇಂದ್ರಾದಿ ದೇವತೆಗಳಿಂದ ದೇವಿಯ ಸ್ತುತಿ' ಎಂಬ ಒಂಬತ್ತನೆಯ ಅಧ್ಯಾಯ ಸಂಪನ್ನವಾಯಿತು.
ಶ್ರೀ ಕೃಷ್ಣಾರ್ಪಣಮಸ್ತು.

ನವರಾತ್ರಿ 9ನೇ ದುರ್ಗಾದೇವಿಯ ಶಕ್ತಿ' ಸಿದ್ದಿದಾತ್ರೀ' #

ಸಿದ್ಧ ಗಂಧರ್ವ ಯಕ್ಷಾದ್ಯೈ
ಅಸುರೈ ರಮರೈ ರಪಿ !
ಸೇವ್ಯಮಾನಾ ಸದಾ ಭೂಯಾತ್
ಸಿದ್ಧಿದಾ ಸಿದ್ದಿದಾಯಿನೀ !!

ಜಗನ್ಮಾತೆ ದುರ್ಗಾದೇವಿಯ 9ನೆಯ ಶಕ್ತಿಯ ಹೆಸರು 'ಸಿದ್ದಿದಾತ್ರಿ' ಆಗಿದೆ.
ಇವಳು ಎಲ್ಲಾ ಪ್ರಕಾರದ ಸಿದ್ದಿಗಳನ್ನು ಕೊಡುವಂತಹಳು ಮಾರ್ಕಾಂಡೆಯ ಪುರಾಣಕ್ಕನುಸಾರ ಅಣಿಮಾ, ಮಹಿಮಾ, ಗರಿಮಾ, ಲಘುಮಾ, ಪ್ರಾಪ್ತಿ, ಪ್ರಾಕಮ್ಯ, ಈಶತ್ವ ಮತ್ತು ವಶೀತ್ವ ಹೀಗೆ ಎಂಟು ಸಿದ್ದಿಗಳು ಇವೆ. ಜಗಜ್ಜನನಿ ಸಿದ್ಧಿದಾತ್ರಿ ದೇವಿಯು ಭಕ್ತರಿಗೆ ಮತ್ತು ಸಾಧಕರಿಗೆ ಇವೆಲ್ಲಾ ಸಿದ್ದಿಗಳನ್ನು ಕೊಡಲು ಸಮರ್ಥವಾಗಿದ್ದಾಳೆ. ದೇವಿ ಪುರಾಣಕ್ಕನುಸಾರ ಭಗವಾನ್ ಶಿವನು ಇವಳ ಕೃಪೆಯಿಂದಲೇ ಇವೆಲ್ಲ ಸಿದ್ದಿಗಳನ್ನು ಪಡೆದುಕೊಂಡಿದ್ದನು. ಇವಳ ಅನುಕಂಪದಿಂದಲೇ ಭಗವಾನ್ ಶಿವನ ಅರ್ಧ ಶರೀರವು ದೇವಿಯದಾಗಿತ್ತು . ಇದೇ ಕಾರಣದಿಂದ ಅವನು ಜಗತ್ತಿನಲ್ಲಿ ಅರ್ಧನಾರೀಶ್ವರ ಎಂಬ ಹೆಸರಿನಿಂದ ಪ್ರಸಿದ್ಧನಾದನು.

ನವರಾತ್ರಿಯ ನವಮಿ ದಿನವನ್ನು (9) ಮಹಾರ್ನವಮಿಯಾಗಿ ಆಚರಿಸುತ್ತೇವೆ.
ಇಂದು ಆಯುಧ ಪೂಜೆಯನ್ನು ಮಾಡಲಾಗುತ್ತದೆ. ದೇವಿಯು ಆಯುಧ ಗಳಿಂದ ಯುದ್ಧ ಮಾಡಿ ದೈತ್ಯರನ್ನು ಸಂಹಾರ ಮಾಡಿದ ಆಯುಧಗಳನ್ನು ದೇವತೆಗಳು ತಂದು ಪೂಜೆ ಮಾಡಿದರು. ಅಂದಿನಿಂದ ಆಯುಧ ಪೂಜೆ ರೂಢಿಗೆ ಬಂದಿತು. ಹಾಗೆ ರಾಜರುಗಳು ಸದಾ ಕಾಲ ಯುದ್ಧದಲ್ಲಿ ನಿರತರಾಗಿ ರುತ್ತಾರೆ. ಆಯುಧಗಳಿಗೆ ಒಂದು ದಿನ ಬಿಡುವು ಕೊಡಬೇಕೆಂದು ಆಶ್ವಿಜ ಮಾಸ ನವರಾತ್ರಿ ಮಹಾನವಮಿ ದಿನದಂದು ಆಯುಧಗಳನ್ನು ಪೂಜೆ ಮಾಡಿ ಆ ದಿನ ಬಿಡುವು ಕೊಡಲಾಗುತ್ತದೆ. ಕಬ್ಬಿಣದ ಎಲ್ಲಾ ಆಯುಧಗಳು ಹಾಗೂ, ವಾಹನ, ಗಾಡ್ರೇಜ್ ಬೀರು, ವ್ಯವಸಾಯ ಉಪಕರಣಗಳು ಹಾಗೂ ಬಡಗಿ ಉಪಕರಣಗಳು, ಸಂಗೀತ ವಾದ್ಯಗಳು, ಹಿಟ್ಟಿನ ಗಿರಣಿ, ಹೊಲಿಯುವ ಮಿಷನ್, ಅಂಗಡಿ, ಹೀಗೆ ಎಲ್ಲವನ್ನು ಅಂದು ಶುಚಿಗೊಳಿಸಿ, ಅಲಂಕರಿಸಿ ಪೂಜಿಸುತ್ತಾರೆ. ಮಹಾ ನವಮಿಯಂದು ದುರ್ಗಾಮಾತೆ ಸಿದ್ಧಿಧಾತ್ರಿ ರೂಪದಲ್ಲಿ ಕೇತು ಗ್ರಹದ ಅಧಿಪತಿಯಾಗಿ ಪೂಜಿಸಲ್ಪಡುತ್ತಾಳೆ. 'ಸಿದ್ದಿಧಾತ್ರಿ'ಯ ಹೆಸರು ಬರಲು ಬಹಳ ದಿವಸಗಳಿಂದ ಯುದ್ಧ ಮಾಡುತ್ತಾ, ಚಂಡ ಮುಂಡ ರನ್ನು ಚೆಂಡಾಡಿ, ಚಾಮುಂಡಿಯಾದಳು, ಮಹಿಷಾಸುರನನ್ನು ಮರ್ಧಿಸಿ ಮಹಿಷೆ ಯಾದಳು. ದುಷ್ಟ ದೈತ್ಯರನ್ನು ರಣರಂಗದಲ್ಲಿ ಸಂಹರಿಸಿದ ದುರ್ಗಾ ಮಾತೆ, ರಕ್ತ ಸಿಕ್ತವಾದ ರೌದ್ರ ಭಯಂಕರ ರೂಪದಲ್ಲಿ ಇರುತ್ತಾಳೆ. ಆಗ ದೇವಾನು ದೇವತೆಗಳೆಲ್ಲ ಬಂದು ತಮ್ಮನ್ನೆಲ್ಲ ರಕ್ಷಿಸಿ ರಕ್ಷಣೆ ಮಾಡಿದ ದೇವಿಯನ್ನು, ಸ್ತುತಿಸಿ, ಭಜಿಸಿ, ಪ್ರಾರ್ಥಿಸುತ್ತಾ, ಹೊಗಳುತ್ತಾರೆ. ಅವರ ಪ್ರಾರ್ಥನೆಗೆ ಒಲಿದ ದೇವಿ ಬೀಭತ್ಸತೆಯಿಂದ, ಹಸನ್ಮುಖಿಯಾಗಿ, ದೇವತೆಗಳಿಗೆ ಎಲ್ಲಾ ಪ್ರಕಾರದ ಸಿದ್ಧಿಗಳನ್ನು ಅನುಗ್ರಹಿಸಿದಳು. ಆದ್ದರಿಂದ ಆಕೆ 'ಸಿದ್ಧಿದಾತ್ರಿ 'ಎನಿಸಿಕೊಂಡಳು. ಮಾರ್ಕಂಡೇಯ ಪುರಾಣಕ್ಕನುಸಾರ ಸಿದ್ಧಿಗಳು ಹೀಗಿದೆ. ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಮ್ಯ, ಈಶಿತ್ವ ಮತ್ತು ವರ್ಷತ್ವ ಹೇಗೆ ಎಂಟು ಸಿದ್ಧಿಗಳು ಇವೆ.

ಸಿದ್ದಿಧಾತ್ರಿಗೆ ನಾಲ್ಕು ಭುಜಗಳಿದ್ದು, ವಾಹನ ಸಿಂಹವಾಗಿದೆ. ಇವಳು ಕಮಲ ಪುಷ್ಪದ ಮೇಲೆ ವಿರಜಾಮಾನಳಾಗಿದ್ದಾಳೆ. ಇವಳ ಕೆಳಗಿನ ಬಲಗೈಯಲ್ಲಿ ಚಕ್ರ, ಮೇಲಿನ ಕೈಯಲ್ಲಿ ಗದೆ ಇದೆ. ಎಡಗಡೆಯ ಕೆಳಗಿನ ಕೈಯಲ್ಲಿ ಶಂಖ ಮತ್ತು ಮೇಲಿನ ಕೈಯಲ್ಲಿ ಕಮಲ ಪುಷ್ಪವಿದೆ. ನವರಾತ್ರಿ 9ನೇ ದಿನ ಇವಳನ್ನು ಉಪಾ ಸನೆ ಮಾಡಲಾಗುತ್ತದೆ. ಇವಳಿಗೆ ತಾಮ್ರವರ್ಣ ಪ್ರಿಯವಾದದ್ದು ಆದುದರಿಂದ ತಾಮ್ರ ಬಣ್ಣದ ಉಡುಗೆ ಮಹತ್ವ ಪಡೆದಿದೆ. ತಾವರೆ, ಸಂಪಿಗೆ, ಮಲ್ಲಿಗೆ ಹೂ ಗಳಿಂದ ಪೂಜೆ ಮಾಡಬೇಕು, ಗುಲಾಬಿ ಹೂವು, ಗುಲಾಬಿ ಬಣ್ಣದ ಗೊರಟೆ ಹೂವು, ಪತ್ರೆಗಳಿಂದ ಪೂಜಿಸಿ ಆರಾಧಿಸಿದರೆ,. ಜ್ಞಾನ ಮತ್ತು ಮೋಕ್ಷ ಪ್ರಾಪ್ತಿ ಸಿಗುತ್ತದೆ. ಕ್ಷೀರಾನ್ನದ ಪಾಯಸ ಪ್ರಿಯವಾದದು. ಕೆಲವರು ಬಲಿ ಎಂದು ಕುಂಬಳಕಾಯಿಯನ್ನು ಒಡೆಯುತ್ತಾರೆ. ಹಾಗೆ ದುರ್ಗಾದೇವಿಗೆ ಮೊಸರವಲಕ್ಕಿ ಅಥವಾ ಮೊಸರನ್ನ ಬಹಳ ಪ್ರಿಯವಾದದು. ನೈವೇದ್ಯ ಮಾಡಬಹುದು. (ಮಕ್ಕಳಿಗೆ ಸಿಡಿಬು,ದಡಾರ, ಆದಾಗ ಹುಷಾರಾದ ಮೇಲೆ ದುರ್ಗಾದೇವಿ ದೇವಸ್ಥಾನಕ್ಕೆ ಹೋಗಿ, ಹಣ್ಣು ಕಾಯಿ ಪೂಜೆ ಜೊತೆ ಮೊಸರನ್ನ ನೈವೇದ್ಯ ಮಾಡಿಸುತ್ತಾರೆ.)
ಈ ದಿನ ಶಾಸ್ತ್ರೀಯ ವಿಧಿ ವಿಧಾನಗಳಿಂದ ಹಾಗೂ ಪೂರ್ಣ ನಿಷ್ಠೆಯಿಂದ ಸಾಧನೆ ಮಾಡುವ ಸಾಧಕರಿಗೆ ಎಲ್ಲಾ ಸಿದ್ದಿಗಳು ಪ್ರಾಪ್ತವಾಗುತ್ತವೆ. ಬ್ರಹ್ಮಾಂಡದ ಮೇಲೆ ವಿಜಯವನ್ನು ಪಡೆಯುವ ಸಾಮರ್ಥ್ಯ ಬರುತ್ತದೆ.
ಪ್ರತಿಯೊಬ್ಬ ಮನುಷ್ಯನು ತಾಯಿ ಸಿದ್ದಿಧಾತ್ರಿಯ ಕೃಪೆಯನ್ನು ಪಡೆದುಕೊಳ್ಳಲು ನಿರಂತರ ಪ್ರಯತ್ನ ಮಾಡಬೇಕು. ಅವಳ ಆರಾಧನೆಯಿಂದ ಅವಳ ಕೃಪೆಗೆ ಪಾತ್ರರಾಗುತ್ತಾರೆ. ಅತ್ಯಂತ ದುಃಖರೂಪೀ ಸಂಸಾರದಿಂದ ನಿರ್ಲಿಪ್ತ ನಾಗಿದ್ದುಕೊಂಡು ಎಲ್ಲಾ ಸುಖಗಳನ್ನು ಭೋಗಿಸುತ್ತಾ, ಅವನು ಮೋಕ್ಷವನ್ನು ಪಡೆಯಬಲ್ಲನು. ನವದುರ್ಗೀಯರಲ್ಲಿ ಸಿದ್ಧಿಧಾತ್ರಿ ದೇವಿಯು ಕೊನೆಯವ ಳಾಗಿದ್ದಾಳೆ. ಬೇರೆ ಎಂಟು ದುರ್ಗೆಯರ ಪೂಜೆ- ಉಪಾಸನೆಯನ್ನು ಶಾಸ್ತ್ರೀ ಯ ವಿಧಿ -ವಿಧಾನಕ್ಕನುಸಾರವಾಗಿ ಮಾಡುತ್ತಾ ಭಕ್ತರು ನವರಾತ್ರಿ 9ನೇ ದಿನ ಇವಳ ಉಪಾಸನೆಯಲ್ಲಿ ಪ್ರವೃತ್ತರಾಗುತ್ತಾರೆ. ಇದರಿಂದ ನವರಾತ್ರಿಯ ಪೂರ್ಣ ಪೂಜಾ ವಿಧಿ ವಿಧಾನಗಳು ಸಂಪನ್ನವಾಗುತ್ತದೆ ಕ ಈ ಸಿದ್ದಿದಾತ್ರೀ ದೇವಿಯ ಉಪಾಸನೆಯನ್ನು ಪೂರ್ಣಗೊಳಿಸಿದ ಬಳಿಕ, ಭಕ್ತರ, ಸಾಧಕರ, ಲೌಕಿಕ ಪಾರಲೌಕಿಕ ಎಲ್ಲಾ ಪ್ರಕಾರದ ಕಾಮನೆಗಳು ಪೂರ್ತಿಯಾಗುತ್ತದೆ .

ಸಿದ್ದಿ ಧಾತ್ರಿ ಮಾತೆಯ ಕೃಪಾ ಪಾತ್ರ ಭಕ್ತನಲ್ಲಿ ಅವನು ಪೂರ್ಣವಾಗಿಸಲುಯಾವುದೇ ಬಯಕೆ ಬಾಕಿ ಉಳಿಯುವುದಿಲ್ಲ. ಮಾನಸಿಕವಾಗಿ ಭಗವತಿಯ ದಿವ್ಯ ಲೋಕಗಳಲ್ಲಿ ಸಂಚರಿಸುತ್ತಾ ಅವಳ ಕೃಪಾರಸ ನಿರಂತರ ಪಾನ ಮಾಡು ತ್ತಾ, ತಾಯಿ ಭಗವತಿಯ ಪರಮ ಸಾನಿಧ್ಯವೇ ಅವನಿಗೆ ಸರ್ವಸ್ವವಾಗುತ್ತದೆ. ಆನಂತರ ಅವನಲ್ಲಿ ಬೇರೆ ಯಾವುದರ ಆಸಕ್ತಿಯು ಅವನಿಗೆ ಇರುವುದಿಲ್ಲ. ಭಗವತಿ ಸಿದ್ಧಿಧಾತ್ರಿಯ ಸಾನಿಧ್ಯವನ್ನು ಪಡೆಯಲು ನಾವು ನಿರಂತರವಾಗಿ ಅವಳ ಉಪಾಸನೆ ಮಾಡಬೇಕು ಇದರಿಂದ ಸಂಸಾರದ ಅಸಾರತೆಯನ್ನು ನೀಡಿ ಪರಮ ಶಾಂತಿದಾಯಕ ಅಮೃತಪದ ಪ್ರಾಪ್ತವಾಗುತ್ತದೆ.

ಶ್ರೀ ಸಿದ್ಧಲಕ್ಷ್ಮಿ ಸ್ತೋತ್ರ:-

ಶ್ರೀದೇವಿ ಪ್ರಥಮ ಪ್ರೋಕ್ತಾ, ದ್ವಿತೀಯಾ ಅಮೃತೋದ್ಭವಾ !
ತೃತಿಯಾ ಕಮಲಾದೇವಿ, ಚತುರ್ಥಿ ಲೋಕ ಸುಂದರೀ !!
ಪಂಚಮಿ ವಿಷ್ಣು ಪತ್ನಿಚಾ, ಷಷ್ಟೀ ಚ ಭುವನತ್ರಯಾ !
ಸಪ್ತಮೀ ತು ವರಾರೋಹ, ಅಷ್ಟಮೀ ದೇವದೇವಿಕಾ !!
ಸಾರಂಗಪಾಣಿ ನವಮೀ, ದಶಮೀ ಹರಿವಲ್ಲಭಾ!
ಏಕಾದಶಿ ಮಹಾಲಕ್ಷ್ಮೀ, ದ್ವಾದಶಿ ಲೋಕ ಪೂಜಿತಾ !!
ಇದಂ ಮಂತ್ರಾತ್ಮಕ ಸ್ತೋತ್ರಂ ಯಹ ಪಠೇತ್ ಶುಚೀನರ !
ತಸ್ಯ ಸರ್ವಾಣಿ ಕಾರ್ಯಾಣಿ ಸಿದ್ಧ್ಯಂತೇವ ನ ಸಂಶಯಹ!!
ಅಲಕ್ಷ್ಮೀ ನಶ್ಯತೆ ತಸ್ಯ ಲಕ್ಷ್ಮಿವಾನ್ ಪುತ್ರವಾನ್ ಭವೇತ್ !
ಶಸ್ತ್ರಾಗ್ನಿ ಜೋರಾ ಭೂತ್ಯಾದಿ ನ ಭವೇತ್ ಚ ಕದಾಚನ !
ಈಶ್ವರೇಣ ಕೃತಂ ಸ್ತೋತ್ರಂ ಪ್ರಜಾನಾಂ ಹಿತಕಾಮ್ಯಯಾ!
ಇದಂ ದಾರಿದ್ರ ಸಂಕಷ್ಟ ನಾಶಂ ಶುಭದಾಯಕಂ !!
ಇತಿ ಬ್ರಹ್ಮಾಂಡ ಪುರಾಣೇ ಈಶ್ವರ ವಿಷ್ಣು ಸಂವಾದೇ ಶ್ರೀ ಸಿದ್ಧಲಕ್ಷ್ಮೀ ಸ್ತೋತ್ರಂ!

ಸಂಕ್ಷಿಪ್ತ ಶ್ರೀದೇವಿ ಮಹಾತ್ಮೆಯ ಅಧ್ಯಾಯ 8: ಮಹಿಷಾಸುರ ಸಂಹಾರ :-!! ಸುರರ ಹಾರೈಸವಲ್ಕೆ  ಪೃಥ್ವಿಯ !ಹೊರೆಯು ಅದು ತೀರ್ಸಲ್ಕೆರಣದಲಿ !ತರೀದಳೈ ಮಹ...
10/10/2024

ಸಂಕ್ಷಿಪ್ತ ಶ್ರೀದೇವಿ ಮಹಾತ್ಮೆಯ ಅಧ್ಯಾಯ 8:
ಮಹಿಷಾಸುರ ಸಂಹಾರ :-

!! ಸುರರ ಹಾರೈಸವಲ್ಕೆ ಪೃಥ್ವಿಯ !
ಹೊರೆಯು ಅದು ತೀರ್ಸಲ್ಕೆರಣದಲಿ !
ತರೀದಳೈ ಮಹಾಲಕ್ಷ್ಮೀ ತಾಂ ಮಹಿಷಾ ಸುರೇಶ್ವರನಾ !!

ಬೃಹತ್ತಾದ ರಣರಂಗದಲ್ಲಿ ರಾಕ್ಷಸ ಸೈನ್ಯ ನಾಶವಾಯಿತು. ರಕ್ತದ ಹೊಳೆಯೇ ಅಲ್ಲಿ ಹರಿಯಿತು. ದೇವಿಯ ಕೋಪಕ್ಕೆ ಅಳಿದುಳಿದ ಶತ್ರು ಸೈನ್ಯವು ಪಲಾಯನ ಮಾಡಿತು. ಚಿಕ್ಷುರ- ಮಹಾಬಿಡಾಲರು ಹತರಾದದ್ದನ್ನು ಕಂಡ ಮಹಿಷಾಸುರನು ಕಾಲಭೈರವನಂತೆ ಕೋಪದಿಂದ ಬಾಲವನ್ನು ತೀಡಿದನು ಹೊಡೆದನು ಆಗ ಭೂಮಿ ಸಾಗರ ಒಂದಾಯಿತು. ಮಹಿಷಾಸುರನ ಕಣ್ಣಿನಿಂದ ಹೊರಟ ಕೋಪದ ಕಿಡಿಗಳು ದೇವತೆಗಳನ್ನು ತಾಕಿದವು. ಇವನು 'ಘೋರ ರಾಕ್ಷಸ'. ದೇವಿ ಇವನೊ ಡನೆ ಹೇಗೆ ಹೋರಾಡುವಳೋ !' ಎಂದು ದೇವತೆಗಳು ಶಂಕಿಸಿದರು. ಮಹಿಷಾ ಸುರನ ಘರ್ಜನೆಗೆ ದೇವಿಯ ವಾಹನ ಸಿಂಹವು ಬೆದರಿತು ಬ್ರಹ್ಮಾಂಡವು ಬೆದ ರಿ ಕಂಗೆಟ್ಟಿತು. ದೇವತೆಗಳು ನಡುಗಿದರು. ಮಹಿಷಾಸುರನು ನಾಲ್ಕುದಿಕ್ಕುಗ ಳಿಂದಲೂ ಸಾವಿರದ ಏಳು ನೂರು ಸೈನ್ಯದೊಂದಿಗೆ ದೇವಿಯನ್ನು ಮುತ್ತಿದನು.

ಬಾಣಗಳ ಬಲೆಯಿಂದ ಆಕೆಯನ್ನು ಕಟ್ಟಿ ಹಾಕಲು ಯೋಚಿಸಿದನು. ಬರಸಿಡಿಲಿನಂತೆ ಎರಗಿದ ಬಾಣಗಳನ್ನು ದೇವಿಯು ತುಂಡರಿಸಿ ಅಸುರನ ವಾಹನ, ಸಾರಥಿ, ರಥಗಳನ್ನು ನಾಶಪಡಿಸಿದಳು. ಆಗ ಮಹಿಷಾಸುರನು ಜಗದಂಬೆಯ ಮೇಲೆ ಪಾಶವನ್ನು ಬೀಸಿದನು. ಆಗ ದೇವಿಯು ತನ್ನ ಖಡ್ಗದಿಂದ ಪಾಶವನ್ನು ಕತ್ತರಿಸಿ ಹಾಕಿದಳು. ಮಹಿಷಾ ಸುರನು ತನ್ನ ಭಯಂಕರವಾದ ಖಡ್ಗದಿಂದ ಸಿಂಹವನ್ನು ಹೊಡೆದನು. ದೇವೀಯು ಆ ಏಟನ್ನು ತಪ್ಪಿಸಿಕೊಂಡು ರಾಕ್ಷಸನ ಮೇಲೆ ಗದಾ ಪ್ರಹಾರ ಮಾಡಿದಳು. ಅವನ ಖಡ್ಗವನ್ನು ವಜ್ರಾಯುಧದಿಂದ ತುಂಡರಿಸಿ ಹಾಕಿದಳು. ಆಗ ಅಸುರನು ಮಹಾ ಗಜವನ್ನೇರಿ ಬಂದು ದೇವಿಯ ಮೇಲೆ ಮತ್ತೆ ಖಡ್ಗ ಪ್ರಹಾರ ಮಾಡಿದನು.

ಸಿಂಹವು ಅವನ ಆನೆಯನ್ನು ಸೀಳಿ ಹಾಕಿತು ಹೀಗೆ ಮಹಿಷಾಸುರನಿಗೂ ದೇವಿಗೂ ಭೀಕರವಾದ ಯುದ್ಧ ನಡೆಯಿತು. ದೇವಿಯು ಮುಸಲ, ಶೂಲ, ಚಕ್ರ, ಮುದ್ಗರ, ಬಾಣ, ಗದೆ, ಪರಕು ಮೊದಲಾದ ಆಯುಧಗಳನ್ನು ಪ್ರಯೋಗಿ ಸಿದಳು. ಈ ಘನ ಘೋರ ಯುದ್ಧವನ್ನು ನೋಡಲಾಗದ ಅನೇಕರು ಮೂರ್ಚೆ ಹೋದರು. ತ್ರಿಮೂರ್ತಿಗಳು ಮಾತ್ರ ಜಗನ್ಮಾತೆಯ ವೀರತ್ವವನ್ನು ಹೊಗಳುತ್ತಿ ದ್ದರು. ಮಹಿಷಾಸುರನ ಬಾಣಗಳಿಂದ ಸಮುದ್ರಗಳು ಬತ್ತಿದವು. ಭೂಮಿ ಛಿದ್ರ ಛಿದ್ರವಾಯಿತು. ಅವುಗಳಿಂದ ಹೊರಟ ಜ್ವಾಲೆಗಳು ಬ್ರಹ್ಮಾಂಡದ ಉದ್ದಗಲಕ್ಕೂ ವ್ಯಾಪಿಸಿತು. ಮಹಿಷಾಸುರನು ಮತ್ತೆ ಖಡ್ಗವನ್ನು ಹಿಡಿದು ದೇವಿಯ ವಾಹನ ಸಿಂಹವನ್ನು ಮುನ್ನೂರು ಬಾರಿ ಎತ್ತಿ ಕುಕ್ಕಿದನು ಅವನ ಘರ್ಜನೆಗೆ ಸಿಂಹವು ಮೂರ್ಛೆ ಹೋಯಿತು ಬ್ರಹ್ಮಾಂಡವು ನಡುಗಿತು.

ಆಗ ದೇವಿಯು ಮಹಾಕೋಪದಿಂದ ಮಹಿಷಾಸುರನನ್ನು ಶೂಲದಿಂದ ತಿವಿದು ಅವನ ನಡುವನ್ನು ಗದೆಯಿಂದ ಅಪ್ಪಳಿಸಿ ಹೂಂಕರಿಸಿದಳು. ಅಸುರನು ಅಸಂಖ್ಯಾತ ಪರ್ವತಗಳನ್ನು ಕಿತ್ತು ದೇವಿಯ ಮೇಲೆ ಎಸೆದನು. ಕ್ಷಣಾರ್ಧದಲ್ಲಿ ಅವು ತುಂಡಾಯಿತು. ಆಗ ತ್ರಿಮೂರ್ತಿಗಳು "ತಾಯಿ ಈ ರಾಕ್ಷಸನನ್ನು ಹೆಚ್ಚು ಕಾಲ ಇರಲು ಬಿಡಬೇಡ ಮಧುಪಾನವನ್ನು ಮಾಡು, ಅದರಿಂದ ನೀನು ಈ ರಕ್ಕಸನನ್ನು ನಿಮಿಷಾರ್ಧದಲ್ಲಿ ನೆಲಕ್ಕೆ ಒರಗಿಸಬಹುದು ಎಂದು ಹೇಳಿದರು.
ದೇವಿಯು ಮಧುಪಾನ ಮಾಡಿದಳು ಕೆಂಪೇರಿದ ಕಣ್ಣುಗಳಿಂದ ಕಿಡಿ ಕಾರುತ್ತಾ ಹೂಂಕರಿಸಿದಳು . ಮುನ್ನುಗ್ಗಿ ಮಹಿಷಾಸುರನನ್ನು ಒದ್ದು ಕಾಲಡಿಯಲ್ಲಿ ಕೆಡವಿ ಕೊಂಡು ಶೂಲದಿಂದ ತಿವಿದು ಎದೆಯ ಮೇಲೆ ನಿಂತು ಅವನ ತಲೆಯನ್ನು ಖಡ್ಗದಿಂದ ಕಡಿದು ಹಾಕಿದಳು.

ಮಹಿಷಾಸುರನು ಮಡಿದನು. ಇಂದ್ರಾದಿ ದೇವತೆಗಳು ಜಯಕಾರವನ್ನು ಮಾಡಿದರು. ಮಹಿಷರೂಪದಲ್ಲೇ ಆ ರಾಕ್ಷಸನು ಸತ್ತು ಭೂಮಿಯ ಮೇಲೆ ಬಿದ್ದೊಡನೆ ಉಳಿದ ರಾಕ್ಷಸರನ್ನು ದೇವಿಯು ತನ್ನ ಕ್ರೋಧಾಗ್ನಿ ಯಿಂದ ಸುಟ್ಟು ಹಾಕಿದಳು. ಮಹೀಷಸುರನ ಸುತ್ತಲೂ ಸತ್ತ ರಾಕ್ಷಸರ ಹೆಣಗಳ ರಾಶಿಯೇ ಬಿದ್ದಿತು. ರಕ್ತವು ಮಹಾಪ್ರವಾಹವಾಗಿ ಹರಿಯುತು ದೇವತೆಗಳು ಪುಷ್ಪವೃಷ್ಟಿ ಗರೆದರು. ದೇವಿಗೆ ಆರತಿ ಎತ್ತಿ ಸ್ತೋತ್ರ ಮಾಡಿ ನಮಸ್ಕರಿಸಿದರು ಎಂಬಲ್ಲಿಗೆ , ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯ ಶ್ರೀ ಚಿದಾನಂದ ಗುರುವಾರ ಶಿಷ್ಯ ಶ್ರೀ ಚಿದಾನಂದವ ಧೂತ ವಿರಚಿತ ಶ್ರೀ ದೇವಿ ಮಹಾತ್ಮೆ 'ಮಹಿಷಾಸುರ ವಧೆ' ಎಂಬ ಎಂಟನೇ ಅಧ್ಯಾಯವು ಸಂಪನ್ನವಾಯಿತು.
ಶ್ರೀ ಕೃಷ್ಣಾರ್ಪಣಾಮಸ್ತು,

ನವರಾತ್ರಿ ಕಥೆ # ಮಹಾಗೌರಿ :-

ಶ್ವೇತೇ ವೃಷೇ ಸಮಾರೂಢಾ ಶ್ವೇತಾಂಬರ ಧರಾಶುಚಿ: !
ಮಹಾಗೌರೀ ಶುಭಂ ದದ್ಯಾತ್ ಮಹಾದೇವಪ್ರಮೋದದಾ !!

ಜಗನ್ಮಾತೆ ದುರ್ಗಾದೇವಿಯ ಎಂಟನೇ ಶಕ್ತಿಯ ಹೆಸರು, ಮಹಾ ಗೌರಿ ಎಂದಾಗಿದೆ. ಇವಳ ಬಣ್ಣವು ಪೂರ್ಣವಾಗಿ ಬೆಳ್ಳಗಿದೆ. ಈ ಬಿಳುಪಿಗೆ ಶಂಖ, ಚಂದ್ರ ಮತ್ತು ಕುಂದಪುಷ್ಪ ಇವಗಳ ಉಪಮೆ ಕೊಡಲಾಗಿದೆ. ಇವಳ ವಯಸ್ಸು
ಎಂಟು ವರ್ಷದವಳೆಂದು ತಿಳಿಯಲಾಗಿದೆ. ಅಷ್ಟ ವರ್ಷಾ ಭವೇದ್ ಗೌರೀ
ಇವಳ ಎಲ್ಲಾ ವಸ್ತ್ರ ಹಾಗೂ ಆಭೂಷಣಗಳು ಬಿಳಿಯದಾಗಿದೆ. ಇವಳಿಗೆ
ನಾಲ್ಕು ಭುಜಗಳಿದ್ದು ವಾಹನ ವೃಷಭವಾಗಿದೆ. ಆ ವೃಷಭವೂ ಬೆಳ್ಳಗಿದೆ.
ಇವಳ ಮೇಲಿನ ಬಲಗೈಯಲ್ಲಿ ಅಭಯಮುದ್ರೆ ಮತ್ತು ಕೆಳಗಿನ ಬಲಗೈಯಲ್ಲಿ ತ್ರಿಶೂಲವಿದೆ . ಮೇಲಿನ ಎಡಗೈಯಲ್ಲಿ ಡಮರು ಹಾಗೂ ಕೆಳಗಿನ ಎಡಗೈಯಲ್ಲಿ ವರದ ಮುದ್ರೆ ಇದೆ ಇವಳ ಮುದ್ರೆ ಅತ್ಯಂತ ಶಾಂತವಾಗಿದೆ.

ತನ್ನ ಪಾರ್ವತಿ ರೂಪದಲ್ಲಿ ಭಗವಾನ್ ಶಿವನನ್ನು ಪತಿಯಾಗಿ ಪಡೆಯಲು ಕಠೋರ ತಪಸ್ಸು ಮಾಡಿದ್ದಾಳೆ. "ವ್ರಿಯೇಹಂ ವರದಂ ಶಂಭುಂ ನಾನ್ಯಂ ದೇವಂ ಮಹೇಶ್ವರಾತ್" ನಾನು ವರದನಾದ ಶಂಭುವಲ್ಲದೆ ಬೇರೆ ಯಾವುದೇ ದೇವತೆಯನ್ನು ವರಿಸುವುದಿಲ್ಲ ಎಂಬ ಪ್ರತಿಜ್ಞೆ ಮಾಡಿದ್ದಳು. ಗೋಸ್ವಾಮಿ ತುಳಸಿದಾಸರು ಹೇಳಿರುವರು. ಅವಳು ಭಗವಾನ್ ಶಿವನನ್ನು ವರಿಸುವುದಕ್ಕಾಗಿ ಕಠೋರ ಸಂಕಲ್ಪ ಮಾಡಿದ್ದಳು. ಈ ಕಠೋರ ತಪಸ್ಸಿ ಕಾರಣ ಇವಳ ಶರೀರವು ಸಂಪೂರ್ಣವಾಗಿ ಕಪ್ಪಾಗಿತ್ತು. ಸಂತುಷ್ಟನಾದ ಭಗವಾನ್ ಶಿವನು ಇವಳ ಶರೀರವನ್ನು ಗಂಗೆಯ ಪವಿತ್ರ ಜಲದಿಂದ ಚೆನ್ನಾಗಿ ತೊಳೆದಾಗ ಅದು ವಿದ್ಯುತ್ತಿನಂತೆ ಅತ್ಯಂತ ಪ್ರಕಾಶಮಾನವಾಗಿ ಬೆಳ್ಳಗಾಯಿತು. ಆಗಿನಿಂದ ಅವರ ಹೆಸರು 'ಗೌರೀ' ಎಂದಾಯಿತು.

ನವರಾತ್ರಿ 8ನೇ ದಿನ ಅಷ್ಟಮಿ ತಿಥಿ, ದುರ್ಗೆ ಮಹಾ ಗೌರಿ ರೂಪದಲ್ಲಿ ಬರುತ್ತಾಳೆ. ಇವಳು ರಾಹುಗ್ರಹದ ಅಧಿಪತಿಯಾಗಿದ್ದಾಳೆ. ಇವಳ ಶಕ್ತಿಯು ಅಮೋಘ ಹಾಗೂ ಸದ್ಯ ಫಲದಾಯಿನಿಯಾಗಿದೆ. ಏಕೆಂದರೆ ಈ ದಿನ ದುರ್ಗೆಯು, ಮಹಾ ಸರಸ್ವತಿ, ಮಹಾಕಾಳಿ, ಮಹಾ ಲಕ್ಷ್ಮಿ, ತ್ರಿಕಾಲದಲ್ಲಿಯು
ಒಂದೊಂದು ದೇವಿಯಂತೆ ಮೂರು ರೂಪದಲ್ಲಿ ಬರುತ್ತಾಳೆ. ಈ ರೀತಿ ಪೂಜಿ ಸಿದರೆ ವಿದ್ಯೆ ಬುದ್ಧಿ, ಧನ ಧಾನ್ಯ, ಸಂಪತ್ತು, ಧೈರ್ಯ, ಇವುಗಳನ್ನು ಅನುಗ್ರಹಿ ಸುತ್ತಾಳೆ. ದುರ್ಗಾ ದೇವಿಗೆ ದೀಪಾರಾಧನೆ ಬಹಳ ಶ್ರೇಷ್ಠವಾದದ್ದು. ಇವಳಿಗೆ ಮಲ್ಲಿಗೆ ಹೂವನ್ನು, ಕೆಂಪು ದಾಸವಾಳ ಅರ್ಪಿಸಬೇಕು, ನೈವೇದ್ಯಕ್ಕೆ ತೆಂಗಿನ ಕಾಯಿ ಹಣ್ಣು, ಸಿಹಿ ಹೂರಣದ ಹೋಳಿಗೆ ಉಳಿದಂತೆ ಚಿತ್ರಾನ್ನ ಪಾಯಸ, ಕೋಸಂಬಯ್ಕ( ರಾಮಾ ಗ್ರೀನ್) ನವಿಲು ಬಣ್ಣದ ಸೀರೆ ಉಡಬೇಕು. ಮುತ್ತೈದೆ, ಅಥವಾ ಸತ್ಪಾತ್ರ ಬ್ರಾಹ್ಮಣನಿಗೆ ದಕ್ಷಿಣೆ ಸಹಿತ ತೆಂಗಿನಕಾಯಿ ಹಣ್ಣು ದಾನ ಕೊಟ್ಟರೆ ಒಳ್ಳೆಯದು. ಇವಳ ಉಪಾಸನೆಯಿಂದ ಭಕ್ತರ ಎಲ್ಲಾ ದೋಷಗಳು ನಿವಾರಣೆಯಾಗುತ್ತದೆ. ಅವರ ಪೂರ್ವ ಸಂಚಿತ ಪಾಪಗಳೂ ಕೂಡ ನಾಶ ವಾಗಿ ಹೋಗುತ್ತದೆ. ಭವಿಷ್ಯದಲ್ಲಿ ಪಾಪ- ಸಂತಾಪ, ದೈನ್ಯ -ದುಃಖ, ಅವರ ಬಳಿಗೆ ಎಂದೂ ಬರುವುದಿಲ್ಲ . ಅವರು ಎಲ್ಲಾ ಪ್ರಕಾರದಿಂದ ಪವಿತ್ರ ಮತ್ತು ಅಕ್ಷಯ ಪುಣ್ಯಗಳ ಅಧಿಕಾರಿಯಾಗುತ್ತಾರೆ. ಜಗಜ್ಜನನಿಯ ಧ್ಯಾನ-ಸ್ಮರಣೆ ಪೂಜೆ ಆರಾಧನೆ ಯಿಂದ ಸಿದ್ಧಿಗಳು ದೊರೆಯುತ್ತದೆ. ಏಕಾಗ್ರ ಚಿತ್ತರಾಗಿ ಗೌರಿ ಯನ್ನು ಧ್ಯಾನ ಮಾಡಬೇಕು ಭಕ್ತರ ಕಷ್ಟಗಳನ್ನು ದೂರ ಮಾಡುತ್ತಾಳೆ. ಅಸಾಧ್ಯವಾದ ಕಾರ್ಯಗಳು ನೆರವೇರುತ್ತದೆ. ದೇವಿಗೆ ಶರಣಾಗತರಾಗಬೇಕು ಪುರಾಣಗಳಲ್ಲಿ ಇವಳ ಮಹಿಮೆಯನ್ನು ಅನೇಕ ಆಖ್ಯಾನಗಳು ಹೊಗಳಿವೆ.
ಇವಳು ಮನುಷ್ಯರ ವೃತ್ತಿಗಳನ್ನು 'ಸತ್' ಕಡೆಗೆ ಪ್ರೇರೇಪಿಸಿ ಅಸತ್ತಿನ ನಾಶ ಮಾಡುತ್ತಾಳೆ. ನವರಾತ್ರಿ ದೇವಿಯನ್ನು ನಿಷ್ಠೆಯಿಂದ ಆರಾಧಿಸಿದವರಿಗೆ ದುರ್ಗತಿಗಳು ನಾಶವಾಗಿ ಸದ್ಗತಿ ದೊರೆಯುತ್ತದೆ.

ನವಶಕ್ತಿ ಪೂಜಾ ಸ್ತೋತ್ರ:-
ಓಂ ದೀಪಾಯೈ ನಮಃ, ಓಂ ಸೂಕ್ಷ್ಮಯೈ ನಮಃ, ಓಂ ಜಯಾಯೈ ನಮಃ,
ಓಂ ಭದ್ರಾಯೈ ನಮಃ, ಓಂ ವಿಭೂತ್ಯೈ ನಮಃ, ಓಂ ವಿಮಲಾಯೈ ನಮಃ,
ಓಂ ಅಮೋಘಾಯೈ ನಮಃ, ಓಂ ವಿದ್ಯುತಾಯೈ ನಮಃ,
ಓಂ ಸರ್ವತೋ ಮುಖ್ಯೈ ನಮಃ
ಶ್ರೀ ಗೌರ್ಯೈ ನಮಃ ನವಶಕ್ತಿ ಪೂಜಾಂ ಸಮರ್ಪಯಾಮಿ!!

ಸರ್ವ ಮಂಗಳ ಮಾಂಗಲ್ಯೇ
ಶಿವೇ ಸರ್ವಾರ್ಥ ಸಾಧಿಕೇ !
ಶರಣ್ಯೇ ತ್ರ್ಯಂಬಕೇ ಗೌರಿ
ನಾರಾಯಣಿ ನಮೋಸ್ತು ತೇ !!

ಸಂಕ್ಷಿಪ್ತ ಶ್ರೀ ದೇವಿ ಮಹಾತ್ಮೆ ಅಧ್ಯಾಯ 7: ಬಿಡಾಲಾಸುರ ವಧೆ !! ಕಡುಶೌರಿ ಪರ ದೇವತೆಯು  ಉ!ಘ್ಘಡದ ದುಷ್ಟ ಬಿಡಾಲನೆಂಬನ !ಮುಡುಹಿದಳು ಮಹಾಲಕ್ಷ್ಮ...
09/10/2024

ಸಂಕ್ಷಿಪ್ತ ಶ್ರೀ ದೇವಿ ಮಹಾತ್ಮೆ ಅಧ್ಯಾಯ 7:

ಬಿಡಾಲಾಸುರ ವಧೆ

!! ಕಡುಶೌರಿ ಪರ ದೇವತೆಯು ಉ!
ಘ್ಘಡದ ದುಷ್ಟ ಬಿಡಾಲನೆಂಬನ !
ಮುಡುಹಿದಳು ಮಹಾಲಕ್ಷ್ಮೀ ಶಿವನ ತ್ರಿಶೂಲ ದಿಂ ರಣಧೀ!!

ಚಿಕ್ಷುರನ ವಧೆಯಾದ ನಂತರ ದೇವಿಯ ಉಗ್ರ ರೂಪವನ್ನು ನೋಡಿ ರಾಕ್ಷಸ ಸೈನ್ಯವು ಹೆದರಿ ಓಡಿತು . ಆಗ ಮಹಾ ಬಿಡಾಲನೆಂಬ ರಾಕ್ಷಸನು ನನ್ನ ಮಿತ್ರ ರನ್ನು ಕೊಂದ ಈ ಹೆಂಗಸನ್ನು ಬಿಡಬಾರದು ಎಂದು ನಿರ್ಧರಿಸಿ ದೇವಿಯ ಮೇಲೆ ಅಸ್ತ್ರಗಳ ಮಳೆಗರೆದನು.

ದೇವಿಯು ಆ ಬಾಣಗಳನ್ನು ತಡೆಗಟ್ಟಿ ಅವನ ಸೈನ್ಯವನ್ನು ನಾಶ ಮಾಡಿ ನೂರಾರು ಬಾಣಗಳಿಂದ ದೈತ್ಯನನ್ನು ಹೊಡೆದಳು. ಆಗ ದೈತ್ಯನು ದೇವಿಯ ಮೇಲೆ ಗದಾ ಪ್ರಹಾರವನ್ನು ಮಾಡಿದನು.ದೇವಿಯ ಬಾಣಗಳು ಆ ಗದೆಯನ್ನು ಅರೇಕ್ಷಣದಲ್ಲಿ ಮುರಿದು ಹಾಕಿತು. ಆಗ ಆ ದೈತ್ಯನು ದೇವಿಯ ವಾಹನವಾದ ಸಿಂಹದ ಮೇಲೆ ಬಾಣ ಪ್ರಯೋಗವನ್ನು ಮಾಡಿದನು.ರಾಕ್ಷಸನು ಭಯಂಕರ ವಾಗಿ ಘರ್ಜಿಸಿ ಅಟ್ಟಹಾಸ ಮಾಡಿದನು. ಜಗನ್ಮಾತೆಯು ಅವನು ಕುಳಿತಿದ್ದ ಮಹಾ ಗಜವನ್ನು ಕೊಂದಳು. ಕೋಪಾವೇಶದಿಂದ ಬಿಡಾಲನು ಮುಷ್ಟಿಯಿಂದ ದೇವಿಯನ್ನು ಗುದ್ಧಿದನು. ಒಡನೆ ಆಕೆಯು ದೈತ್ಯನ ಮೇಲೆ ಶೂಲ ಪ್ರಯೋಗ ವನ್ನು ಮಾಡಿದಳು. ಆಗ ಬಿಡಾಲಾಸುರನು , "ಎಲೈ! ದೇವಿ ನಿನ್ನ ವೀರತ್ವವನ್ನು ಮೆಚ್ಚಿದೆ. ಇನ್ನು ಹೆಚ್ಚು ಯುದ್ಧ ಬೇಡ ಇಲ್ಲಿಂದ ಹೊರಟು ಹೋಗು" ಎಂದನು.

ಆದರೆ, ದೇವಿಯು, "ಮಹಿಷಾಸುರನ ಕುಲವನ್ನು ಸೈನ್ಯದೊಡನೆ ಕೊಂದು ನಾಶಪಡಿಸುವೆನೆಂಬ ಪ್ರತಿಜ್ಞೆ ನನ್ನದು" ಎಂದಳು. ಆಗ ಬಿಡಾಲನು ಬ್ರಹ್ಮಾಸ್ತ್ರ ವನ್ನು ಆಕೆಯ ಮೇಲೆ ಪ್ರಯೋಗಿಸಿದನು. ಆಗ ಸಪ್ತ ಸಾಗರಗಳ ನೀರು ಒಣಗಿ ಹೋಯಿತು. ದಿಕ್ಪಾಲಕರ ಪಟ್ಟಣಗಳು ಸುಟ್ಟು ಹೋದವು. ದೇವತೆಗಳು ಹೆದರಿದರು. ಬ್ರಹ್ಮಾಸ್ತ್ರವು ಪ್ರಕಾಶಮಾನವಾಗಿ ಹೊಳೆಯುತ್ತಾ ದೇವಿಯ ತೋಳಬಂದಿಯಲ್ಲಿ ರತ್ನವಾಗಿ ಸೇರಿ ಹೋಯಿತು. ಬಿಡಾಲನು ಮತ್ತೆ ಕೋಪ ದಿಂದ ದೇವಿಯ ಮೇಲೆ ಮುಷ್ಟಿ ಯುದ್ಧವನ್ನು ಮಾಡಿದನು. ಆಗ ಶಾಂಭವಿ ಯು ಶಿವನ ತ್ರಿಶೂಲದಿಂದ ಬಿಡಾಲನ ಎದೆಯನ್ನು ಸೀಳಿ ಕೊಂದಳು.

ಅಳಿದುಳಿದ ದೈತ್ಯರನ್ನು ಯಮಸದನಕ್ಕೆ ಅಟ್ಟಿದಳು. ದೇವತೆಗಳು,"ಹೇ ಜಗನ್ಮಾತೆ, ನೀನು ರಾಕ್ಷಸರನ್ನು ಕೊಂದು, ನಮ್ಮನ್ನು ಸಲಹಿದೆ" ಎಂದು ಕೃತಜ್ಞತೆಯಿಂದ ಆಕೆಯನ್ನು ಸ್ತೋತ್ರ ಮಾಡಿದರು ಎಂಬಲ್ಲಿಗೆ ಶ್ರೀಮತ್ಪ ರಮಹಂಸ ಪರಿವ್ರಾಜಕಾಚಾರ್ಯ ಶ್ರೀ ಚಿದಾನಂದ ಗುರುವರ ಶಿಷ್ಯ ಶ್ರೀ ಚಿದಾನಂದವಾಧೂತ ವಿರಚಿತ ದೇವಿ ಮಹಾತ್ಮೆಯಲ್ಲಿ 'ಬಿಡಾಲಸುರ ವಧೆ'
ಎಂಬ ಏಳನೆಯ ಅಧ್ಯಾಯವು ಸಂಪನ್ನವಾಯಿತು.
ಶ್ರೀಕೃಷ್ಣಾರ್ಪಣಮಸ್ತು ಹರಿ ಓಂ🙏

ನವರಾತ್ರಿ ದೇವಿ "ಕಾಲ ರಾತ್ರಿ ಅಥವಾ ಕಾಳರಾತ್ರಿ":-

ಏಕವೇಣೀ ಜಪಾಕರ್ಣಪೂರಾ ನಗ್ನ ಖರಾಸ್ಥಿತಾ !
ಲಂಬೋಷ್ಠೀ ಕರ್ಣಿಕಾಕರ್ಣೀ ತೈಲಾಭ್ಯಕ್ತ ಶರೀರಿಣೀ!
ವಾಮಪಾದೋಲ್ಲಸಲ್ಲೋಹ ಲತಾಕಂಟಕ ಭೂಷಣಾ !
ವರ್ಧನಮೂರ್ಧ ಧ್ವಜಾ ಕೃಷ್ಣಾ
ಕಾಲರಾತ್ರಿರ್ಭಯಂಕರೀ !!

ಜಗನ್ಮಾತೆ ದುರ್ಗೆಯ ಏಳನೆಯ ಶಕ್ತಿಯನ್ನು 'ಕಾಲರಾತ್ರಿ'ಯ ಎಂಬ ಹೆಸರಿನಿಂದ ತಿಳಿಯಲಾಗುತ್ತದೆ. ಅವಳ ಶರೀರದ ಬಣ್ಣವು ದಟ್ಟವಾದ ಅಂಧಕಾರದಂತೆ ಪೂರ್ಣವಾಗಿ ಕಪ್ಪು ಬಣ್ಣವಾಗಿದೆ. ತಲೆಯ ಕೂದಲು ಬಿಟ್ಟುಕೊಂಡು ಹರಡಿರುತ್ತದೆ. ಕತ್ತಿನಲ್ಲಿ ಮಿಂಚಿನಂತೆ ಹೊಳೆಯುತ್ತಿರುವ ಮಾಲೆ ಇದ್ದು , ಬ್ರಹ್ಮಾಂಡದಂತೆ ಗೋಲವಾಗಿರುವ ಹೊಳೆಯುತ್ತಿರುವ ಮೂರು ಕಣ್ಣುಗಳಿವೆ. ಇವುಗಳ ಕಿರಣಗಳು ವಿದ್ಯುತ್ತಿನಂತೆ ಪಸರಿಸಿಕೊಂಡಿದೆ. ಇವಳ ವಾಹನ ಕತ್ತೆಯಾಗಿದೆ. ಇವಳ ಬಣ್ಣ ಗಾಢ ಕಪ್ಪು ಮಿಶ್ರಿತ ನೀಲಿ ಬಣ್ಣ. ಮೂಗಿನಿಂದ ಉಚ್ಛ್ವಾಸ ನಿಶ್ವಾ ಸದ ಅಗ್ನಿಯ ಭಯಂಕರ ಜ್ವಾಲೆಗಳು ಹೊರ ಬರುತ್ತಿದೆ. ಇವಳಿಗೆ ನಾಲ್ಕು ಕೈಗಳಿದ್ದು, ಮೇಲಕ್ಕೆ ಎತ್ತಿರುವ ಬಲಗೈ ವರಮುದ್ರೆ ಯಿಂದ ಎಲ್ಲರಿಗೆ ವರದಾನ ನೀಡುವಳು. ಕೆಳಗಿನ ಬಲಗೈ ಅಭಯಮುದ್ರೆ ಯಂತಿದೆ, ಎಡಗಡೆ ಮೇಲಿನ ಕೈಯಲ್ಲಿ ಕಬ್ಬಿಣದ ಮುಳ್ಳು ಹಾಗೂ ಕೆಳಗಿನ ಕೈಯಲ್ಲಿ ಖಡ್ಗವಿದೆ. ಮಲ್ಲಿಗೆ ಮತ್ತು ಕೃಷ್ಣ ಕಮಲ ಹೂವಿನ ಅಲಂಕಾರ. ಬೆಲ್ಲದಿಂದ ಮಾಡಿದ ಸಿಹಿಯಾದ ಅನ್ನ ಇವಳಿಗೆ ಪ್ರಿಯವಾದುದು. ಕಾಳರಾತ್ರಿ ದುರ್ಗೆಯ ಸ್ವರೂಪ ನೋಡಲು ಅತ್ಯಂತ ಭಯಂಕರವಾಗಿದೆ. ಆದರೆ ಇವಳು ತನ್ನನ್ನು ಆರಾಧಿಸುವ ಭಕ್ತರಿಗೆ ಶುಭ ಫಲವನ್ನೇ ಕೊಡುತ್ತಾಳೆ. ಈ ಕಾರಣ ದಿಂದ ಇವಳಿಗೆ 'ಶುಭಂಕರಿ' ಎಂತಲೂ ಕರೆಯುತ್ತಾರೆ. ಆದ್ದರಿಂದ ಇವಳ ಭಕ್ತರು ಯಾವುದೇ ರೀತಿಯಿಂದಲೂ ಹೆದರಬೇಕಾದ ಅವಶ್ಯಕತೆ ಇಲ್ಲ.‌ ಕಾಳರಾತ್ರಿ ಭಯಂಕರ ರೂಪ, ಸಮಯದ ರೂಪವಾಗಿದ್ದಾಳೆ. ಇವಳು ಶನಿ ಗ್ರಹದ ಅಧಿಪತಿ. ಆದ್ದರಿಂದ ಇವಳನ್ನು ಪೂಜಿಸಿದಾಗ ಶನಿ ದೋಷ, ಸಾಡೇ ಸಾತಿಯ ಪ್ರಭಾವ ಕಡಿಮೆಯಾಗುತ್ತದೆ. ಜನರು ಮಾಡುವ ಒಳಿತು ಕೆಡುಕು ಗಳಿಗೆ ತಕ್ಕಂತೆ ವರ ನೀಡುತ್ತಾಳೆ. ದುಷ್ಟ ಶಿಕ್ಷಕಿ, ಶಿಷ್ಟ ರಕ್ಷಕಿ ಆಗಿದ್ದಾಳೆ.

ಪೌರಾಣಿಕ ಕಥೆ:- ಒಮ್ಮೆ ಶುಂಭ- ನಿಶುಂಭ ಎಂಬ ದೈತ್ಯರು ದೇವತೆಗಳ ರಾಜ್ಯವನ್ನು ಕಸಿದುಕೊಂಡರು. ಅಷ್ಟದಿಕ್ಪಾಲಕರನ್ನೂ ಸೋಲಿಸಿದರು. ಇಂದ್ರನನ್ನು ಸಿಂಹಾಸನದಿಂದ ಕೆಳಗೆ ಇಳಿಸಿದರು. ತಮಗೆ ಒದಗಿದ ಕಷ್ಟವನ್ನು
ಹೇಳಿಕೊಳ್ಳಲು ದೇವತೆಗಳು ದೇವಿಯ ಮೊರೆಹೊಕ್ಕರು. ಶುಂಭ- ನಿಶುಂಭ ರು ಅಮರತ್ವದ ವರವನ್ನು ಪಡೆದು ಸ್ತ್ರೀ ಹೊರತಾಗಿ ಬೇರೆ ಯಾರೂ ಕೊಲ್ಲಲು ಸಾಧ್ಯವಿರಲಿಲ್ಲ. ದೇವತೆಗಳು ಹಿಮಾಚಲಕ್ಕೆ ಹೋಗಿ ಅಲ್ಲಿ ಪಾರ್ವತಿಯನ್ನು ಕಂಡು ನಮಸ್ಕರಿಸಿ, ತಮ್ಮ ಸಂಕಷ್ಟ ಸ್ಥಿತಿಯನ್ನು ಹೇಳಿದರು. ದೇವಿ ಪಾರ್ವತಿ ಅವರ ಪ್ರಾರ್ಥನೆಯನ್ನು ಆಲಿಸಿ ಅವಳು ದೇವತೆಗಳನ್ನು ಅಲ್ಲಿಯೇ ಇರು ವಂತೆ ಹೇಳಿ ಸುಂದರ ರೂಪ ತಾಳಿ ಹಿಮಾಚಲಕ್ಕೆ ಬಂದಳು. ಶುಂಭ- ನಿಶುಂಭ ಆಕೆಯನ್ನು ತಮ್ಮ ಸ್ತ್ರೀ ರತ್ನವನ್ನಾಗಿ ಇಟ್ಟುಕೊಳ್ಳಲು ಯೋಚಿಸಿದರು. ದೇವಿಗೆ ತಿಳಿದು ನನ್ನನ್ನು ಇದುವರೆಗೂ ಯಾರು ಸೋಲಿಸಿಲ್ಲ. ನನ್ನನ್ನು ಗೆದ್ದು ಯಾರು ಗೆಲ್ಲುತ್ತಾರೆ ಅವರೇ ನನ್ನ ಪತಿ ಎಂದಳು.

ಹೀಗೆ ಶುರುವಾದ ಯುದ್ಧದಲ್ಲಿ ಶುಂಭ -ನಿಶುಂಭ, ಹಾಗೂ ಮಹಿಷಾ ಸುರನ ಗೆಳೆಯರಾದ ಚಂಡ -ಮುಂಡ ರಕ್ಕಸರನ್ನು ವೈಷ್ಣವಿ, ಕೌಮಾರಿ, ಇಂದ್ರಾಣಿ, ಕಾಳಿ ಮುಂತಾದ ರೂಪಗಳಿಂದ ಕೊಂದಳು. ಉಳಿದ ದೈತ್ಯರನ್ನು ಸಂಹರಿಸಿ ದಳು. ಇದನ್ನೆಲ್ಲಾ ನೋಡಿ ಸಿಟ್ಟಿನಿಂದ ರಕ್ತ ಬೀಜ ಸುರ ಎಂಬ ರಾಕ್ಷಸನು ಅವಳನ್ನು ಎದುರಿಸಲು ಬಂದನು. ರಕ್ತ ಬೀಜಾಸುರನಿಗೆ ಒಂದು ವರವಿತ್ತು. ಆ ಪ್ರಕಾರ ಇವನು ಒಂದ ಹನಿ ರಕ್ತ ಭೂಮಿ ಮೇಲೆ ಬಿದ್ದರೂ ಸಹಸ್ರಾರು ರಾಕ್ಷಸ ರು ಹುಟ್ಟುತ್ತಿದ್ದರು. ಕಾಳಿ ಮಾತೆ ದೇವಿಯು ಆ ರಾಕ್ಷಸನ ರಕ್ತ ಭೂಮಿ ಮೇಲೆ ಬೀಳದಂತೆ ತನ್ನ ಕರಾಳ ರೂಪದ ನಾಲಿಗೆಯನ್ನು ಹೊರಚಾಚಿ ಅವನ ರಕ್ತವನ್ನೆಲ್ಲ ಹೀರಿದಳು. ನಂತರ ಅವನನ್ನು ಸಂಹರಿಸಿ ತಿಂದು ಹಾಕಿದಳು. ಇದರಿಂದಾಗಿ, ಅವಳಿಗೆ ಮದವೇರಿ ನರ್ತನ ಮಾಡ ತೊಡಗಿದಳು. ನರ್ತನ ಮಾಡುತ್ತಾ ಮಾಡುತ್ತಾ, ಶಿವನ ಎದೆಯ ಮೇಲೆ ನಿಂತಾಗ ಅವಳ ರೌದ್ರ ರೂಪ ಹೋಗಿ, ಸಹಜ ಸ್ಥಿತಿಗೆ ಬಂದಳು. ಹೀಗೆ ರಾಕ್ಷಸರನ್ನೆಲ್ಲಾ ಸಂಹಾರ ಮಾಡಿ ದೈತ್ಯರು ವಶಪಡಿಸಿಕೊಂಡಿದ್ದ ಸ್ವರ್ಗ ಲೋಕವನ್ನು ಅವರಿಗೆ ಕೊಡಿಸಿದಳು. ದೇವತೆಗಳು ಹರ್ಷೋದ್ಗಾರ ಮಾಡುತ್ತಾ ದೇವಿಯನ್ನು ಭಕ್ತಿಯಿಂದ ಪರಿಪರಿಯಾಗಿ ಸ್ತುತಿಸಿದರು.

ದೈತ್ಯರನ್ನೆಲ್ಲ ಸಂಹಾರ ಮಾಡಿದ ಆದಿಶಕ್ತಿಯನ್ನು ನವರಾತ್ರಿ ಏಳನೇ ದಿನ ಕಾಲರಾತ್ರಿ ಸ್ವರೂಪದಲ್ಲಿ ಉಪಾಸನೆ ಮಾಡುವ ಸಾಧಕನ ಮನಸ್ಸು 'ಸಹಸ್ರಾರ' ಚಕ್ರದಲ್ಲಿ ನೆಲೆಗೊಳ್ಳುತ್ತದೆ. ಅವನಿಗಾಗಿ ಬ್ರಹ್ಮಾಂಡದ ಎಲ್ಲಾ ಸಿದ್ದಿಗಳ ಬಾಗಿಲು ತೆರೆದುಕೊಳ್ಳುತ್ತವೆ. ಈ ಸಮಯದಲ್ಲಿ ಸಾಧಕನ ಮನಸ್ಸು ಪೂರ್ತಿಯಾಗಿ ಕಾಳರಾತ್ರಿ ಸ್ವರೂಪದಲ್ಲಿ ಸ್ಥಿರವಾಗುತ್ತದೆ. ಅವಳ ಸಾಕ್ಷಾತ್ಕಾರ ಪಡೆಯುತ್ತಾನೆ. ಸಕಲ ಪಾಪಗಳು ನಾಶವಾಗಿ ಅಕ್ಷಯ ಪುಣ್ಯ ಲೋಕಗಳ ಪ್ರಾಪ್ತಿಯಾಗುತ್ತದೆ. ದುಷ್ಟ ಶಕ್ತಿಗಳು ಇವಳ ಸ್ಮರಣೆ ಮಾತ್ರದಿಂದಲೇ ಭಯ ಬೀತರಾಗಿ ಓಡಿ ಹೋಗುತ್ತವೆ. ಗೃಹ ಬಾಧೆಗಳು ನಾಶವಾಗುತ್ತದೆ. ಇವಳ ಉಪಾಸಕರಿಗೆ ಅಗ್ನಿ, ಜಲ, ಜಂತು, ಶತ್ರು, ಮತ್ತು ರಾತ್ರಿ ಭಯ ಎಂದಿಗೂ ಇರುವುದಿಲ್ಲ. ದೇವಿಯ ಅನುಗ್ರಹದಿಂದ ಭಯಮುಕ್ತನಾಗುತ್ತಾನೆ .

ಕಾಲರಾತ್ರಿರ್ಮಹಾರಾತ್ರಿ
ಮೋಹ ರಾತ್ರಿಶ್ಚ ದಾರುಣಾ !
ತ್ವಂ ಶ್ರೀಸ್ತ್ವಮೀಶ್ವರೀ ತ್ವಂ
ಹ್ರೀಸ್ತ್ವಂ ಬುದ್ಧಿರ್ಭೋಧಲಕ್ಷಣಾ !!

ಸಂಕ್ಷಿಪ್ತ ಶ್ರೀ ದೇವಿ ಮಹಾತ್ಮೆ:ಅಧ್ಯಾಯ6 :ಚಿಕ್ಷುರ ವಧೆ!!ಚಂಡಬಲ ಪರದೇವಿ ಮಹ ಉ !ದ್ದಂಡ  ಸಚಿವನ  ಚಿಕ್ಷುರಾಖ್ಯನ !ಖಂಡಿಸಿದಳೈ ಸಮರದಲಿ ಮಹಾಲಕ್...
09/10/2024

ಸಂಕ್ಷಿಪ್ತ ಶ್ರೀ ದೇವಿ ಮಹಾತ್ಮೆ:ಅಧ್ಯಾಯ6 :ಚಿಕ್ಷುರ ವಧೆ

!!ಚಂಡಬಲ ಪರದೇವಿ ಮಹ ಉ !
ದ್ದಂಡ ಸಚಿವನ ಚಿಕ್ಷುರಾಖ್ಯನ !
ಖಂಡಿಸಿದಳೈ ಸಮರದಲಿ ಮಹಾಲಕ್ಷ್ಮೀ ಶೂಲದಲಿ !!

ಸೂತಪುರಾಣಿಕರು ದೇವಿ ಮಹಾತ್ಮೆಯನ್ನು ಮುಂದುವರೆಸಿದರು. ರಸಿ ಲೋಮ,ರುದಗ್ರ ,ಹಾಗೂ ದೈತ್ಯ ಸೇನೆ ನಷ್ಟವಾದ ಮೇಲೆ ರಾಕ್ಷಸರಿಗೆ ಭಯ ವಾಯಿತು. ಆಗ ಚಿಕ್ಷುರ ಎಂಬ ರಾಕ್ಷಸನು,- 'ಈ ಸ್ತ್ರೀಯು ರಾಕ್ಷಸರಿಗೆ ಮೃತ್ಯು ರೂಪವಾಗಿದ್ದಾಳೆ. ಎಂದೂ ಇಂತಹ ಪರಾಭವ ನಮಗೆ ಉಂಟಾಗಿರಲಿಲ್ಲ ಎಂದುಕೊಂಡು ಧನುರ್ಧಾರಿಯಾಗಿ ದೇವಿಯೊಡನೆ ಯುದ್ಧಕ್ಕೆ ಬಂದನು. ಅವನು ಬಿಟ್ಟ ಬಾಣಗಳೆಲ್ಲವೂ 10 ದಿಕ್ಕುಗಳನ್ನು ಆವರಿಸಿತು. ಆ ಶಬ್ದಕ್ಕೆ ಪರ್ವತಗಳು ಉರುಳಿದವು. ಸಮುದ್ರಗಳು ಉಕ್ಕಿದವು. ದೇವಿಯು ತನ್ನ ಬತ್ತಳಿಕೆಯಿಂದ ಬಾಣಗಳನ್ನು ತೆಗೆದು ಬಿಲ್ಲಿಗೆ ಹೂಡಿ, ಆ ಬಾಣಗಳನ್ನು
ಕತ್ತರಿಸಿ ಹಾಕಿದಳು. ಆತನ ಕುದುರೆ ಆನೆ ಹಾಗೂ ಸೈನ್ಯವನ್ನು ಯಮ ಪುರಿಗೆ ಕಳಿಸಿದಳು. ಚಿಕ್ಷುರನು ಮೂರ್ಛೆ ಹೋದನು. ಮತ್ತೆ ಚೇತರಿಸಿಕೊಂಡು ಹೊಸ ರಥವನ್ನೇರಿ ದೇವಿಯ ಮೇಲೆ ಮತ್ತೆ ನಗಶರವೆಂಬ ಬಾಣಪ್ರಯೋಗವನ್ನು ಮಾಡಿದನು. ಇದರ ಫಲವಾಗಿ ಅಸಂಖ್ಯಾತ ಪರ್ವತಗಳು ಬಂದು ಉರುಳಿದ ವು.ಆಗ ಪರಾಂಬೆಯು ವಜ್ರಾಯುಧದಿಂದ ಪರ್ವತಗಳನ್ನು ಕಡಿದು ಹಾಕಿದಳು.

ಮರುಕ್ಷಣ ಸಾಗರಾಸ್ತ್ರವನ್ನು ಪ್ರಯೋಗಿಸಿದನು. ಪರಾಶಕ್ತಿಯು ಅದನ್ನು ತಡೆದು ಸಮುದ್ರವನ್ನೇ ಆಪೋಶನವನ್ನಾಗಿ ಕುಡಿದಳು. ಚಿಕ್ಷುರನು ನಿಷಿ, ಬಾಣ, ಇಂದ್ರ, ಕುಬೇರ, ಅಗ್ನಿ, ಶೂಲ, ಮೊದಲಾದ ಅಸ್ತ್ರಗಳನ್ನು ದೇವಿಯ ಮೇಲೆ ಪ್ರಯೋಗಿಸಿದನು. ಆಕೆಯು ಈ ಎಲ್ಲಾ ಅಸ್ತ್ರಗಳನ್ನೂ ನುಂಗಿದಳು. ಆಗ ನಿರಾಶನಾಗದೆ ಚಿಕ್ಷುರನು ಮಹಾ ನಾರಾಯಣಾಸ್ತ್ರವನ್ನು ಕೈಯಲ್ಲಿ ಹಿಡಿದು ನಿಂತನು. ದೇವತೆಗಳೆಲ್ಲರೂ ದಿವ್ಯಾಸ್ತ್ರಕ್ಕೆ ಕೈ ಮುಗಿದು ನಿಂತರು.
ಭೂಮಿಯು ಸಿಡಿಯಿತು. ಸಪ್ತ ಸಾಗರಗಳು ಉರಿಗಳನ್ನು ಉಗುಳಿದವು.ಆ ಮಹಾಸ್ತ್ರವು ಧಗಧಗಿಸುತ್ತಿತ್ತು . ಇಂತಹ ನಾರಾಯಣಾಸ್ತ್ರವನ್ನು ರಾಕ್ಷಸನು ದೇವಿಯ ಮೇಲೆ ಪ್ರಯೋಗಿಸಿದನು. ಆಗ ಶಾಂಭವಿ ನಸುನಗುತ್ತ ಅದನ್ನು ನುಂಗಿದಳು. ದೇವತೆಗಳಿಗೆ ಸಂತೋಷವಾಯಿತು. ರಾಕ್ಷಸರು ಭಯಭೀತ ರಾದರು.

ಚಿಕ್ಷರನು ಈ ಅದ್ಭುತವನ್ನು ನೋಡಿ, 'ದೇವಿ ನೀನು ಯಾರು? ದೇವತೆಗಳಿಗೂ ನಿನಗೂ ಏನು ಸಂಬಂಧ ? ಸ್ತ್ರೀ ಯಾದ್ದರಿಂದ ನಿನಗೆ ಪ್ರಾಣ ಭಿಕ್ಷೆ ನೀಡುತ್ತೇನೆ ಹೇಳು ಎಂದು ಗರ್ವದಿಂದ ಹೇಳಿದನು. ದೇವಿಯು, ಮೂರ್ಖ ರಾಕ್ಷಸನೇ, ನಾನು ಈ ಜಗತ್ತಿನ ಒಡತಿ. ನಿಮ್ಮನ್ನು ಕೊಲ್ಲಲು ದೇವತೆಗಳು ನನ್ನನ್ನು ಇಲ್ಲಿಗೆ ಕರೆತಂದಿದ್ದಾರೆ ಎಂದು ಅವನ ಮೇಲೆ ಬಾಣ ಪ್ರಯೋಗ ಮಾಡಿದಳು. ಆಗ ಚಿಕ್ಷುರನು, ಮಹೀಷಾಸುರನಲ್ಲದೆ ಈ ಜಗತ್ತಿಗೆ ಯಾರೂ ಒಡೆಯರಲ್ಲ. ನೀನು ಹೇಳುತ್ತಿರುವುದು ಸತ್ಯವಲ್ಲ, ಎನ್ನುತ್ತಾ ಮತ್ತೆ ಬಾಣಗಳ ಸುರಿಮಳೆಯನ್ನೇ ಸುರಿಸಿದನು.

ಶಾಂಭವಿಯು ಅವನ ಬಾಣಗಳನ್ನು ಕತ್ತರಿಸಿ ಸಾರಥಿಯನ್ನು ಕೊಂದು ರಾಕ್ಷಸನ ಕವಚಗಳನ್ನು ಸೀಳಿದಳು . ಇದನ್ನು ನೋಡಿದ ಚಿಕ್ಷುರನು ತನ್ನ ಮಾಯೆಯನ್ನು ಬೀಸಿದನು. ಆಗ ಕತ್ತಲೆ ಮುಸುಕಿ, ಮಳೆ ಸುರಿದು ಬಿರುಗಾಳಿ ಉಂಟಾಗಿ, ಸಹಸ್ರಾರು ಸಂಖ್ಯೆಯ ರಾಕ್ಷಸರೂ, ಭಯಂಕರ ಪ್ರಾಣಿಗಳೂ ದೇವಿಯನ್ನು ಮುತ್ತಿದರು. ದೇವಿಯ ಮುಂದೆ ರಾಕ್ಷಸನ ಆಟ ಹೆಚ್ಚು ಕಾಲ ನಡೆಯಲಿಲ್ಲ. ಆಕೆಯು ಶಿವನ ತ್ರಿಶೂಲದಿಂದ ರಾಕ್ಷಸನನ್ನು ತಿವಿದಳು.ಚಿಕ್ಷು ರನು ದೇವಿಯ ಹೊಡೆತ ತಾಳಲಾರದೆ ಮೃತನಾದನು. ದೇವತೆಗಳು, 'ಜಯ ಮಾತೆ, ಜಯದುರ್ಗೆ, ಜಯ ಜನನಿ' ಎಂದು ಸ್ತೋತ್ರ ಮಾಡಿದರು. ಎಂಬಲ್ಲಿಗೆ, ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯ ಶ್ರೀ ಚಿದಾನಂದ ಗುರುವರ ಶಿಷ್ಯ ಶ್ರೀ ಚಿದಾನಂದಾವಧೂತ ವಿರಚಿತ ದೇವೀ ಮಹಾತ್ಮೆಯ 'ಚಿಕ್ಷುರ ವಧೆ'ಎಂಬ ಆರನೆಯ ಅಧ್ಯಾಯ ಸಂಪನ್ನವಾಯಿತು.
ಶ್ರೀ ಕೃಷ್ಣಾರ್ಪಣಮಸ್ತು. 🙏

ನವರಾತ್ರಿ ಕಥೆ:- ಕಾತ್ಯಾಯಿನಿ ದೇವಿ:-

ಚಂದ್ರ ಹಾಸೋಜ್ಜ್ವಲಕರಾ
ಶಾರ್ದೂಲ ವರವಾಹನಾ !
ಕಾತ್ಯಾಯಿನಿ ಶುಭಂ ದದ್ಯಾತ್
ದೇವಿ ದಾನವಘಾತಿನೀ !!

ಜಗನ್ಮಾತೆ ದುರ್ಗೆಯ ಆರನೇ ಸ್ವರೂಪದ ಹೆಸರು 'ಕಾತ್ಯಾಯಿನಿ' ಎಂದಾಗಿದೆ.
ನವರಾತ್ರಿ ಆರನೇ ದಿನ ಶುಕ್ರವಾರ ಮೂಲಾ ನಕ್ಷತ್ರ, ತಿಥಿ ಷಷ್ಠೀ , ಶುಕ್ಲ ಪಕ್ಷ ಕಾತ್ಯಾಯನಿ ಆರಾಧನೆಯಿಂದ ಸಮೃದ್ಧಿ, ಯಶಸ್ಸು ದೊರೆಯುತ್ತದೆ ಹಾಗೂ ಮದುವೆ ಯಾಗುವ ಹೆಣ್ಣು ಅಥವಾ ಗಂಡುಗಳಿಗೆ ಮದುವೆ ಯೋಗ ಕೂಡಿ ಬರುತ್ತದೆ. ಕಾತ್ಯಾಯಿನಿದೇವಿ ಗುರುಗ್ರಹಕ್ಕೆ ಅಧಿಪತಿಯಾಗಿದ್ದಾಳೆ. ಗುರುಗ್ರಹ ಸಹಿತ ಕಾತ್ಯಾಯಿನಿ ಪೂಜೆ ಮಾಡಿದರೆ ದೇವಿಯ ಜೊತೆ ಗುರುವಿನ ಅನುಗ್ರಹ ದೊರೆಯುತ್ತದೆ. ಇದರಿಂದ ವಿಳಂಬವಾಗಿರುವ ಮದುವೆ,ಉಪನಯನ,ಮನೆ, ಶುಭ ಕಾರ್ಯಗಳು ನೆರವೇರುವುದು. ಸಂಕಷ್ಟಗಳು ದೂರವಾಗುತ್ತದೆ. ಕಾತ್ಯಾ ಯಿನಿ ದೇವಿಗೆ ಹಸಿರು ಬಣ್ಣದ ಪ್ರಿಯವಾದದ್ದು. ಹಸಿರು ಸಮೃದ್ಧಿಯ ದ್ಯೋತ ಕವಾಗಿದೆ ಬಿಳಿ ಹೂವು ಹಾಗೂ ಸೇವಂತಿಗೆ ಸೇರಿದಂತೆ ಎಲ್ಲ ಮಲ್ಲಿಗೆ ಸಂಪಿಗೆ ಹೂಗಳಿಂದ ಅಲಂಕರಿಸಿ ಪ್ರಸಾದಕ್ಕೆ ಅಕ್ಕಿ ,ಕಡಲೆ ಬೇಳೆ, ಸಕ್ಕರೆ -ಹಾಲು ತುಪ್ಪ ಹಾಕಿ ಮಾಡಿದ ಪಾಯಸ ಬಹಳ ಪ್ರಿಯವಾದದ್ದು. ಈ ಪಾಯಸಕ್ಕೆ ಪರಮಾನ್ನ ಎನ್ನುತ್ತಾರೆ. ಪಲ್ಯ, ಕೋಸಂಬರಿ, ಚಿತ್ರಾನ್ನ, ಬಾಳೆಹಣ್ಣು ಜೇನುತುಪ್ಪ ಹಾಕಿದ ರಸಾಯನ ನೈವೇದ್ಯಕ್ಕೆ ಇಡಬಹುದು.

ಇವಳಿಗೆ ಕಾತ್ಯಾಯಿನಿ ಎಂಬ ಹೆಸರು ಬರಲು ಒಂದು ಕಥೆ:-
'ಕತ'-- ಎಂಬ ಮಹರ್ಷಿಗಳು ಇದ್ದರು. ಅವರ ಪುತ್ರ ಋಷಿ ಕಾತ್ಯನಾದನು.ಇದೆ ಕಾತ್ಯ ಗೋತ್ರದಲ್ಲಿ ವಿಶ್ವಪ್ರಸಿದ್ಧ ಮಹರ್ಷಿ ಕಾತ್ಯಾಯನರು ಹುಟ್ಟಿದರು.
ಇವರು ಭಗವತಿ ಉಪಾಸನೆ ಮಾಡುತ್ತಾ ಅನೇಕ ವರ್ಷಗಳವರೆಗೆ ಕಠಿಣ ತಪಸ್ಸು ಮಾಡಿದ್ದರು. ಭಗವತಿ ದೇವಿಯು ತಮ್ಮ ಮಗಳಾಗಿ ಅವತರಿಸ ಬೇಕೆಂಬ ಇಚ್ಛೆ ಅವರಲ್ಲಿ ಇತ್ತು. ಆ ಪ್ರಾರ್ಥನೆಯ ಪ್ರಕಾರ, ಆ ಸಮಯದಲ್ಲಿ ದಾನವ ಮಹೀಷಾಸುರನ ಉಪಟಳ ಭೂಮಿಯಲ್ಲಿ ತುಂಬಾ ಹೆಚ್ಚಾಗಿತ್ತು. ಪರಮಾತ್ಮರಾದ ಬ್ರಹ್ಮ -ವಿಷ್ಣು -ಮಹೇಶ್ವರರು ಮತ್ತು ಎಲ್ಲಾ ದೇವತೆಗಳು ತಮ್ಮ ತಮ್ಮ ತೇಜದ ಅಂಶದಿಂದ ಶಕ್ತಿ ದೇವಿಯನ್ನು ಸೃಷ್ಟಿ ಮಾಡಿದರು. ಈ ಶಕ್ತಿ ದೇವತೆಗೆ ಆಯುಧ ಆಭರಣ ಎಲ್ಲವನ್ನು ಕೊಟ್ಟು ಹಾರೈಸಿ, ಜೈ ಜೈ ಕಾರ ಮಾಡಿ ಕಳಿಸಿದರು. ಇವಳು ದೈತ್ಯರನ್ನು ಹಾಗೂ ಮಹಾ ದೈತ್ಯ ಮಹಿಷಾಸುರ ನನ್ನು ಸಂಹರಿಸಿದಳು. ಈ ದೇವಿಯ ಪೂಜೆಯನ್ನು ಮೊಟ್ಟ ಮೊದಲು ಕಾತ್ಯಾಯನ ಮಹರ್ಷಿಗಳು ಮಾಡಿದರು. ಇದೇ ಕಾರಣದಿಂದ ಇವಳು ಕಾತ್ಯಾಯಿನಿಯಾದಳು. ಇವಳು ಮಹರ್ಷಿ ಕಾತ್ಯಾಯಿಂದರಲ್ಲಿ ಪುತ್ರಿ ರೂಪ ದಿಂದ ಅವತರಿಸಿದ್ದಳು ಎಂಬ ಕಥೆಯು ಇದೆ. ಭಾದ್ರಪದ ಕೃಷ್ಣ ಚತುರ್ದಶಿ ಯಂದು ಇವಳು ಆವೀರ್ಭವಿಸಿ ಆಶ್ವಿಜ ಮಾಸ ಶುಕ್ಲ ಸಪ್ತಮಿ- ಅಷ್ಟಮಿ- ನವಮಿ-ಯವರೆಗೆ ಮೂರು ದಿನ ಕಾತ್ಯಾಯನ ಋಷಿಯ ಪೂಜೆಯನ್ನು ಸ್ವೀಕರಿಸಿ ಆ ಕಾಲದಲ್ಲಿ ಅಟ್ಟಹಾಸದಿಂದ ಮೆರೆಯುತ್ತಿದ್ದು ದೇವತೆಗಳಿಗೂ ಋಷಿಮುನಿಗಳಿಗೂ ಕಾಟ ಕೊಡುತ್ತಿದ್ದ, ಮಹಾದೈತ್ಯ ಮಹಿಷಾಸುರನನ್ನು ಸಂಹರಿಸಿ ದೇವಾನು ದೇವತೆಗಳಿಗೆ ಸಂತೋಷವನ್ನು ಕೊಟ್ಟಳು.

ನವರಾತ್ರಿ ಯಲ್ಲಿ 9 ದಿನ 9 ದೇವಿಯರು ಗ್ರಹಗಳ ಅಧಿಪತಿಯಾಗಿರುತ್ತಾರೆ ಎಂಬುದರ ಹಿನ್ನೆಲೆ ಹೀಗಿದೆ. ದೈತ್ಯರು ಎಲ್ಲಾ ಗ್ರಹಗಳನ್ನು ಬಂಧಿಸಿ ಇಟ್ಟಿದ್ದರು. ಶಕ್ತಿ ದೇವತೆ ಚಾಮುಂಡಿ ದೈತ್ಯರನ್ನು ಸೋಲಿಸಿ ಗ್ರಹಗಳನ್ನು ಬಂಧನದಿಂದ ಬಿಡಿಸಿದಳು. ಇದರಿಂದ ಸಂತೋಷಗೊಂಡ ಗ್ರಹಗಳು, ನವರಾತ್ರಿಯ 9 ದೇವಿಯರಲ್ಲೂ ಒಂದೊಂದು ಗ್ರಹದ ಅಧಿಪತಿಯಾಗಿರುವಾಗ , ಈ ಗ್ರಹಗಳ ಒಳಗೊಂಡ ದೇವಿಯನ್ನು ಪೂಜಿಸಿದರೆ, ಆಯಾ ಗ್ರಹಗಳ ಗ್ರಹ ದೋಷವನ್ನು ನಿವಾರಣೆ ಮಾಡುತ್ತೇವೆ ಎಂದು ಮಾತುಕೊಟ್ಟವು. ಈ ಕಾರಣದಿಂದಾಗಿ ನವರಾತ್ರಿಯ ಪ್ರತಿ ದೇವಿಯು ಒಂದೊಂದು ಗ್ರಹಗಳ ಅಧಿಪತಿಯಾಗಿ ಆವೀರ್ಭವಿಸುತ್ತಾಳೆ. ದೇವಿಯ ಆರಾಧನೆ ಮಾಡುವುದರ ಜೊತೆಗೆ ಗ್ರಹ ಬಾಧೆಯು ನಿವಾರಣೆ ಆಗುತ್ತದೆ.

ಜಗನ್ಮಾತೆ ಕಾತ್ಯಾಯಿನಿ ಫಲದಾಯಿನಿಯಾಗಿದ್ದಾಳೆ. ಭಾಗವತದಲ್ಲಿ ಕಥೆ ಬರುವಂತೆ ಕೃಷ್ಣನನ್ನು ಪತಿಯಾಗಿ ಪಡೆಯಲು ವ್ರಜದ ಗೋಪಿಕೆಯರು
( ವ್ರಜ ಅಂದರೆ ಇಡೀ ಭೂಮಂಡಲದ ವ್ಯಾಪ್ತಿ ಶ್ರೀ ಕೃಷ್ಣನಿಗೆ ಒಳಪಟ್ಟಿದ್ದು ಎಂಬ ಅರ್ಥ) ಕಾಳಿಂದಿ- ಯಮನೆಯ ತೀರದಲ್ಲಿ ಕಾತ್ಯಾಯನಿಯನ್ನು ಪೂಜಿಸಿದ್ದರು. ಇವಳು ವ್ರಜಮಂಡಲದ ಅದಿಷ್ಟಾತ್ರಿ ದೇವಿಯಾಗಿ ಪ್ರತಿಷ್ಠಿತ ವಾಗಿದ್ದಾಳೆ. ಇವಳ ಸ್ವರೂಪ ಅತ್ಯಂತ ಭವ್ಯ ಮತ್ತು ದಿವ್ಯವಾಗಿದೆ. ಇವಳಿಗೆ ನಾಲ್ಕು ಭುಜಗಳಿವೆ ಬಲಗಡೆ ಮೇಲಿನ ಕೈ ಅಭಯ ಮುದ್ರೆ ಯಲ್ಲಿದೆ. ಕೆಳಗಿನ ಕೈ ವರಮುದ್ರೆಯಲ್ಲಿದೆ. ಎಡಗಡೆಯ ಮೇಲಿನ ಕೈಯಲ್ಲಿ ಖಡ್ಗವಿದೆ. ಕೆಳಗಿನ ಕೈಯಲ್ಲಿ ಕಮಲ ಪುಷ್ಪವಿದೆ. ಭಗವತಿಯಾದ ಈಕೆ ದೇವತೆಗಳಿಗೆ ಸಂತೋಷ ಕೊಡಲು ಆ ದಿನ ಚಂಡಮುಂಡರನ್ನ ಸಂಹಾರ ಮಾಡಿ ಚಾಮುಂಡಿ ಎಂಬ ಹೆಸರನ್ನು ಪಡೆದಳು. ವಿಜಯದ ಸಂಕೇತವಾಗಿ ಹಸಿರು ಬಣ್ಣದ ಸೀರೆ ಉಟ್ಟುಕೊಂಡು ಸಿಂಹ ವಾಹಿನಿಯಾಗಿರುವ ಇವಳು ಭಕ್ತರ ಪಾಲಿಗೆ ಅತ್ಯಂತ ಶಾಂತ ಸ್ವರೂಪದವಳು. ಮಕ್ಕಳನ್ನು ಪರಿಪಾಲನೆ ಮಾಡುತ್ತಾಳೆ, ಗುರು ಗ್ರಹ ವನ್ನು ಪ್ರತಿನಿಧಿಸಿದ್ದಾಳೆ. ಈ ತಾಯಿಗೆ 'ಆದಿಸೃಷ್ಟಿ' ಎಂಬ ಬಿರುದು ಬಂದಿದೆ.
ಕಾತ್ಯಾಯನೇ ಆರಾಧನೆ ಮಾಡಿದರೆ ಗುರುವಿನ ಅನುಗ್ರಹ ಪ್ರಾಪ್ತಿಯಾಗುತ್ತದೆ.

ಏತತ್ತೆ ವದನಂ ಸೌಮ್ಯಂ
ಲೋಚನತ್ರಯಭೂಷಿತಮ್ !
ಪಾತು ನ ಸರ್ವಬೀತಿಭ್ಯ:
ಕಾತ್ಯಾಯಿನಿ ನಮೋಸ್ತುತೇ !!

ಯಾ ದೇವಿ ಸರ್ವಭೂತೇಷು ಲಕ್ಷ್ಮೀ ರೂಪೇಣ ಸಂಸ್ಥಿತಾ
ನಮಸ್ತಸ್ಯೆ ನಮಸ್ತಸ್ಯೆ ನಮಸ್ತಸ್ಯೆ ನಮೋ ನಮಃ !!

ಸಂಕ್ಷಿಪ್ತ ಶ್ರೀ ದೇವಿ ಮಹಾತ್ಮೆ ಅಧ್ಯಾಯ 5: ರಸಿಲೋಮ - ರುದಗ್ರ ವಧೆ:- !! ಪರಮ  ಪರದೇವತೆಯು ರಣದಲಿ !ದುರುಳ  ರಸಿಲೋಮನ ರುದಗ್ರನ !ಹರಣ ಕೊಂಡಳು ...
07/10/2024

ಸಂಕ್ಷಿಪ್ತ ಶ್ರೀ ದೇವಿ ಮಹಾತ್ಮೆ ಅಧ್ಯಾಯ 5: ರಸಿಲೋಮ - ರುದಗ್ರ ವಧೆ:-

!! ಪರಮ ಪರದೇವತೆಯು ರಣದಲಿ !
ದುರುಳ ರಸಿಲೋಮನ ರುದಗ್ರನ !
ಹರಣ ಕೊಂಡಳು ಸುರರು ನಲಿಯಲಿಕಾಗ ಮಹಾಲಕ್ಷ್ಮಿ !!

ಮಹಿಷಾಸುರನ ಸೈನಿಕರು ದೇವಿಯಿಂದ ಹತರಾದುದನ್ನು ನೋಡಿ ರಸೀಲೋಮನೆಂಬ ರಾಕ್ಷಸನು ಕೋಪಾವಿಷ್ಟನಾಗಿ ದೇವಿಯ ಮೇಲೆ ಬಾಣ ಪ್ರಯೋಗ ಮಾಡಿದನು. ಆಕೆಯ ವಾಹನವಾದ ಸಿಂಹದ ರೋಮ ರೋಮಕ್ಕೂ ತಾಕುವಂತೆ ಬಾಣಗಳ ಮಳೆಯನ್ನೇ ಸುರಿಸಿದನು. ಆದರೆ, ದೇವಿಯ ಮೇಲೆ, ಕಾಳ್ಗಿಚ್ಚಿನ ಮಂಜಿನ ಹನಿಗಳು ಬಿದ್ದಂತೆ ವ್ಯರ್ಥವಾಯಿತು.

ರಸಿಲೋಮನು ಮತ್ತೆ ಮತ್ತೆ ವಿವಿದಾಸ್ತ್ರಗಳನ್ನು ಪ್ರಯೋಗಿಸಿದನು. ದೇವಿಯು ಆತನ ರಥ, ಸೈನ್ಯ ಬಲಗಳನ್ನು ನಾಶಪಡಿಸಿದಳು. ಆಗ ಅವನು 'ಹೇ ಸ್ತ್ರೀಯೇ ! ನೀನು ಸಾಮಾನ್ಯಳಲ್ಲ .ಆದರೆ ಸ್ತ್ರೀಯನ್ನು ಕೊಲ್ಲಲು ನನಗೆ ಇಷ್ಟವಿಲ್ಲ.‌ ನೀನು ಹೋಗು ಎಂದನು. ದೇವಿಯು, ರಸಿಲೋಮ ! ನೀನು ಹೇಳಿದ್ದು ಸರಿ, ಆದರೆ ನಾನು ಬಂದಿರುವುದು ನಿನ್ನ ಸಂಹಾರಕ್ಕಾಗಿ, ಎಂದು ಹೇಳುತ್ತಾ ದಿವ್ಯ ಬಾಣವನ್ನು ಆತನ ಮೇಲೆ ಪ್ರಯೋಗಿಸಿದಳು.

ಹಸಿಲೋಮನ ಕವಚ, ಆಯುಧಗಳು ನಾಶವಾದವು. ದೇವತೆಗಳು ಭೀಕರ ಶಬ್ದದಿಂದ ನಡುಗಿದರು.‌ ಪರ್ವತಗಳು ಅಲುಗಾಡಿದವು ಸಿಡಿಲಿನಂತೆ ಬಂದ ಅವನ ಗದೆಯನ್ನು ದೇವಿಯು ತುಂಡರಿಸಿದಳು. ದೇವಿಯು ತನ್ನ ಶೂಲದಿಂದ ಆತನ ಬಾಣ ಗದೆಗಳನ್ನು ಚೂರು ಚೂರು ಮಾಡಿದಳು. ರಸಿಲೋಮನು ಮೂರ್ಚಿತನಾದನು. ಮತ್ತೆ ಎದ್ದು, ಮಹಾಶಕ್ತ್ಯಾಯುಧ ಪ್ರಯೋಗಿಸಿದನು. ಎಲ್ಲಾ ಕಡೆಯೂ ಹೊಗೆ ಆವರಿಸಿತು. ನದಿಗಳು ಬತ್ತಿದಂತಾಯಿತು. ಆಗ ದೇವಿಯು ಅದನ್ನು ತಡೆದು ಅದೇ ಶಕ್ತ್ಯಾಯುಧದಿಂದ ಅವನ ಎದೆಗೆ ಘಾತಿಸಿ ಹೊಡೆದಳು. ಅದು ರಸಿಲೋಮನ ಎದೆಯನ್ನು ಕೊರೆದು ದೇವಿಯ ಕೊರಳ ಹಾರದ ಪದಕವಾಗಿ ಬಂದು ಸೇರಿತು. ಈ ರೀತಿ ರಸಿಲೋಮನು ಮೃತನಾದನು. ದೇವತೆಗಳಿಗೆ ಸಂತೋಷವಾಯಿತು.
ರಸಿಲೋಮನ ವಧೆಯ ನಂತರ ಇನ್ನೊಬ್ಬ ರಕ್ಕಸನಾದ ರುದಗ್ರನು ಭಯಂಕರವಾದ ಧನುಸ್ಸನ್ನು ಹಿಡಿದು ದೇವಿಯ ಮೇಲೆ ತೀಕ್ಷ್ಣವಾದ ಬಾಣಪ್ರಯೋಗ ಮಾಡಿದನು. ಎಲ್ಲಾ ಕಡೆ ಮಳೆಯ ಮೋಡದಂತೆ ಬಾಣಗಳು ಮುಸುಕಿದವು ದೇವಿಯು ಮೇಘಾಸ್ತ್ರದಿಂದ ಅದನ್ನು ನಿವಾರಿಸಿ ಸಿಡಿಲಿನಂತೆ ಬಲಯುತವಾದ ಬಾಣಗಳನ್ನು ಪ್ರಯೋಗಿಸಿದಳು. ರುದಗ್ರನಿಗೆ ಒಬ್ಬ ಸ್ತ್ರೀಗೆ ಇಷ್ಟೊಂದು ಪ್ರತಾಪವೇ ?ಎಂದು ಆಶ್ಚರ್ಯವಾಯಿತು. ಹರಿ-ಹರ ಬ್ರಹ್ಮಾದಿಗಳೇ ನಮ್ಮ ಬಾಣಗಳನ್ನೆದುರಿಸಲು ಸಾಧ್ಯವಿಲ್ಲವಾದಾಗ ಈಕೆ ಯಾರು ? ಎಂದುಕೊಂಡು ಬೆರಗಾಗಿ ಕೇಳಿದ ; ದೇವಿ ನೀನು ಯಾರು ಎಲ್ಲಿಂದ ಬಂದೆ ? ನಿನಗೂ ದೇವತೆಗಳಿಗೂ ನಂಟೇನು?

ದೇವಿಯು ನಸುನಕ್ಕು ರುದಗ್ರಾ, ನಾನು ಕಾಲವನ್ನೇ ಮೀರಿದ ನಿತ್ಯ ಶಕ್ತಿಯಾಗಿದ್ದೇನೆ. ನನ್ನ ಹೆಸರು ಮಹಾಲಕ್ಷ್ಮಿ. ದೇವತೆಗಳೆಲ್ಲರೂ ನನ್ನ ಮಕ್ಕಳು ನಿಮ್ಮ ಉಪದ್ರವವನ್ನು ಸಹಿಸಲಾರದೆ ಅವರೆಲ್ಲರೂ ನನ್ನನ್ನು ಇಲ್ಲಿಗೆ ಮಹಿಷಾಸುರನ ವಂಶ ನಾಶಕ್ಕಾಗಿ ಪ್ರಾರ್ಥಿಸಿ ಕಳಿಸಿದ್ದಾರೆ ಎಂದು ಹೇಳಿದಳು.
ರುದಗ್ರನು , ಈ ಮೂರು ಲೋಕಗಳಿಗೂ ಮಹಿಶಾಸುರನಲ್ಲದೆ ಬೇರೆ ಯಾರು?
ಆ ದೇವತೆಗಳನ್ನು ಬಿಟ್ಟು ನೀನೊಬ್ಬಳೇ ಬಂದೆಯಾ? ಎಂದು ನುಡಿದು ದೇವಿಯ ಮೇಲೆ ಅಸ್ತ್ರ ಪ್ರಯೋಗವನ್ನು ಮಾಡಿದನು. ದೇವಿಯು ಅವನ ರಥ, ಸಾರಥಿ, ಆಯುಧ, ಸೈನ್ಯಗಳನ್ನು ನಾಶಪಡಿಸಿದಳು. ರುದಗ್ರನು ಆಗ ಶೂಲವನ್ನು ಎತ್ತಿದನು. ದೇವತೆಗಳು ಹೆದರಿ ಓಡಿ ಹೋದರು ದೇವಿಯು ಅವರಿಗೆ ಅಭಯವನ್ನು ನೀಡಿ ತನ್ನ ಶೂನ್ಯದಿಂದ ರಾಕ್ಷಸನ ಹಸ್ತವನ್ನು ತುಂಡರಿಸಿದಳು. ಆಗ ಅವನು ಸಮ್ಮೋಹನಾಸ್ತ್ರವನ್ನು ಪ್ರಯೋಗಿಸಿ, ದೇವಿ,
ನೀನು ಇದನ್ನು ಎದುರಿಸಿದರೆ, ನೀನು ಹೇಳಿದ್ದು ಸತ್ಯ, ಎಂದನು. ಆಶ್ಚರ್ಯ ಆಗ, ರಾಕ್ಷಸ ಸೈನ್ಯವೇ ಮಂಕಾಗಿ ಮಲಗಿತು. ಆಗ ರುದಗ್ರನು ಕಂಗೆಟ್ಟು ಅಸ್ತ್ರವನ್ನು ಹಿಂತೆಗೆದುಕೊಂಡನು. ರುದಗ್ರಹನಿಗೆ ಕೋಪ ಹೆಚ್ಚಾಗಿ ಶಾಂಭವಾಸ್ತ್ರವನ್ನು ಪ್ರಯೋಗಿಸಿದನು.

ಆಗ ಸಾವಿರಾರು ರಾಕ್ಷಸರು, ಹುಲಿ, ಸಿಂಹ ,ಶರಭಗಳು ಹುಟ್ಟಿಕೊಂಡವು ದೇವಿಯು ಸಿಂಹ ಘರ್ಜನೆ ಮಾಡಿ ಪಾಶವನ್ನು ಅವರ ಮೇಲೆ ಪ್ರಯೋಗಿಸಲು ಎಲ್ಲವೂ ಮಾಯವಾಯಿತು. ರಾಕ್ಷಸನು ಕೋಪದಿಂದ ಗದೆಯನ್ನು ಎತ್ತಿಕೊಳ್ಳಲು ಶರದಿಂದ ಆಕೆಯು ಅವನ ತಲೆಯನ್ನು ಕತ್ತರಿಸಿ ಹಾಕಿದಳು. ರಾಕ್ಷಸನ ಮುಂಡವು ಮತ್ತೆ ಹೋರಾಡಿತು. ದೇವಿಯು ರುದಗ್ರನ
ಶೌರ್ಯಕ್ಕೆ ಮೆಚ್ಚಿದಳು. ನಂತರ ಅವನ ಮುಂಡವನ್ನು ಕತ್ತರಿಸಿ , ಆತನ ಉಳಿದ ಸೈನ್ಯವನ್ನು ನಾಶಪಡಿಸಿದಳು. ರಕ್ತದ ಪ್ರವಾಹವೇ ಹರಿಯಿತು. ಆಗ ದೇವತೆಗಳು ದೇವಿಯನ್ನು ಸ್ತೋತ್ರ ಮಾಡಿದರೆಂಬಲ್ಲಿಗೆ, ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯ ಶ್ರೀ ಚಿದಾನಂದ ಗುರುವರ ಶಿಷ್ಯ ಶ್ರೀ ಚಿದಾನಂದಾವಧೂತ ವಿರಚಿತ ದೇವಿ ಮಹಾತ್ಮೆಯಲ್ಲಿ, ಹಸಿಲೋಮ- ರುದಗ್ರ
ವಧೆಯೆಂಬ ಐದನೆಯ ಅಧ್ಯಾಯ ಸಂಪನ್ನವಾಯಿತು.
ಶ್ರೀ ಕೃಷ್ಣಾರ್ಪಣಮಸ್ತು.

ಜಗನ್ಮಾತೆ ದುರ್ಗೆಯ 5ನೇ ಸ್ವರೂಪ "ಸ್ಕಂದ ಮಾತಾದೇವಿ" :-
!!ಸಿಂಹಸನಗತಾ ನಿತ್ಯಂ
ಪದ್ಮಾಶ್ರಿತ ಕರದ್ವಯಂ !
ಶುಭ ದಾಸ್ತು ಸದಾ ದೇವೀ
ಸ್ಕಂದ ಮಾತಾ ಯಶಸ್ವಿನಿ !!

ಸ್ಕಂದ ಮಾತಾ ದುರ್ಗೆಯ 5ನೇ ಅವತಾರ ನವರಾತ್ರಿಯ ಐದನೇ ದಿನ ಅಂದರೆ ಪಂಚಮಿ ದಿನ, ಸಿಂಹಾರೂಡಳಾಗಿರುತ್ತಾಳೆ. ಇವಳಿಗೆ ಬಾಲ ತ್ರಿಪುರ ಸುಂದರಿ ಎಂದು ಕರೆಯುತ್ತಾರೆ. ಇವಳ ಮಗ ಆರು ಮುಖದ ಸ್ಕಂದನನ್ನು ತೊಡೆಯ ಮೇಲೆ ಕೂರಿಸಿಕೊಂಡಿರುವ ಸ್ಕಂದ ಮಾತೆಯ ಅವತಾರವಾದ ಈಕೆಯನ್ನು ಪೂಜಿಸಬೇಕು. ಭಗವಂತ ಸ್ಕಂದನನ್ನು "ಕುಮಾರ ಕಾರ್ತಿಕೇಯ" ಎಂಬ ಹೆಸರಿನಲ್ಲೂ ಕರೆಯುತ್ತಾರೆ. ಇವನು ಪ್ರಸಿದ್ಧ ದೇವಾಸುರ ಸಂಗ್ರಾಮ ದಲ್ಲಿ ದೇವತೆಗಳ ಸೇನಾಧಿಪತಿ ಯಾಗಿದ್ದನು. ಪುರಾಣಗಳಲ್ಲಿ ಇವನನ್ನು ಕುಮಾರ ಹಾಗೂ ಶಕ್ತಿಧರ ಎಂದು ಇವನ ಮಹಿಮೆಯನ್ನು ವರ್ಣಿಸಲಾಗಿದೆ ಇವನ ವಾಹನ ನವಿಲು ಆದ್ದರಿಂದ ಇವನನ್ನು ಮಯೂರವಾಹಾನ ಎಂದು ಕರೆಯುತ್ತಾರೆ. ನವರಾತ್ರಿ ದಿನಗಳಲ್ಲಿ ಸ್ಕಂದಮಾತೆಯ ಅವತಾರದ ಶಕ್ತಿ ಅತ್ಯಧಿಕ ವಾಗಿದೆ. ಇವಳು ಬುಧ ಗ್ರಹಕ್ಕೆ ಅಧಿಪತಿ. ಸ್ಕಂದಮಾತೆಯನ್ನು ಪೂಜಿ ಸುವುದರಿಂದ ಬುದದೋಷಗಳು ನಿವಾರಣೆಯಾಗುತ್ತದೆ. ಸ್ಕಂದಮಾತೆ ಜೊತೆಗೆ ಅವಳ ಮಗನ ಸ್ಕಂದನ ಅನುಗ್ರಹ ವನ್ನು ಪಡೆಯಬಹುದು.

ಸ್ಕಂದ ಮಾತೆಗೆ ನಾಲ್ಕು ಭುಜಗಳಿರುತ್ತವೆ. ಬಾಲರೂಪಿ ಸ್ಕಂದನು ಬಾಲರೂಪದಲ್ಲಿ ದೇವಿಯ ಬಲ ತೊಡೆಯಲ್ಲಿ ಕುಳಿತಿರುವ ಸ್ಕಂದನನ್ನು ಬಲಗೈಯಲ್ಲಿ ಹಿಡಿದುಕೊಂಡಿರುವಳು. ಮೇಲೆತ್ತಿರುವ ಬಲಗೈಯಲ್ಲಿ ಕಮಲ ಪುಷ್ಪವನ್ನು ಹಿಡಿದಿರುವಳು. ಎಡಗೈನಲ್ಲಿ ಅಭಯ ಹಸ್ತದ ವರಮುದ್ರೆ ಇದೆ. ಮೇಲೆ ಎತ್ತಿರುವ ಎಡಗೈಯಲ್ಲಿ ಕಮಲ ಪುಷ್ಪವಿದೆ. ಇವಳ ಶರೀರ ಪೂರ್ಣ
ಬೆಳ್ಳಗಿದ್ದು , ಕಮಲದ ಆಸನದಲ್ಲಿ ವಿರಾಜಮಾನಳಾಗಿದ್ದಾಳೆ. ಆದ್ದರಿಂದ ಇವಳನ್ನು ಪದ್ಮಸನಾ ದೇವಿ ಎಂದು ಕರೆಯುತ್ತಾರೆ. ಇವಳನ್ನು ಸಂತಾನ ಭಾಗ್ಯಕ್ಕಾಗಿ ವಿಶೇಷವಾಗಿ ಆರಾಧಿಸುತ್ತಾರೆ. ಪಾರಿಜಾತ ಮತ್ತು -ಕೆಂಪು ಗುಲಾಬಿ ಹೂಗಳು, ಪತ್ರೆಗಳಿಂದ ಅಥವಾ ಕುಂಕುಮದಿಂದ ಅಷ್ಟೋತ್ತರ ಹೇಳಿಕೊಂಡು ಅರ್ಚನೆ ಮಾಡಬೇಕು. ಇವಳಿಗೆ ಹಸಿರು ಬಣ್ಣದ ಸೀರೆ ಪ್ರಿಯವಾದದ್ದು. ಪ್ರಸಾದಕ್ಕೆ ಬೇಳೆ ಹೋರ್ಣದಿಂದ ಮಾಡಿದ ಕರಿಗಡಬು, ಮತ್ತು ಕಾಯಿ ಸಾಸಿವೆ ಚಿತ್ರಾನ್ನ ಅಥವಾ ಪುಳಿಯೋಗರೆ ನೈವೇದ್ಯ ಮಾಡಬೇಕು. ಬಾಳೆಹಣ್ಣು ಪ್ರಿಯವಾದದ್ದು.

ನವರಾತ್ರಿಯ ಐದನೇ 'ಪಂಚಮಿ' ದಿನ ಇವಳನ್ನು ವಿಶೇಷವಾಗಿ ಆರಾಧಿಸುತ್ತಾರೆ ಈ ಪೂಜೆಗೆ ಬಹಳ ಮಹತ್ವವಿದೆ ಉಪಾದಿಸುವ ಸಾಧಕನ ಮನಸ್ಸು "ವಿಶುದ್ಧ" ಚಕ್ರದಲ್ಲಿ ನೆಲೆ ನಿಲ್ಲುತ್ತದೆ. ಆ ಸಮಯದಲ್ಲಿ ಇವನು ಚೈತನ್ಯ ಸ್ವರೂಪ ದತ್ತ ಮುಂದುವರೆಯುತ್ತಾನೆ. ಲೌಕಿಕ, ಸಂಸರದ ಮಾಯಾ ಬಂಧನಗಳಿಂದ ಮನಸ್ಸು ಮುಕ್ತರಾಗಿ ಪದ್ಮಾಸನ ಸ್ಕಂದಮಾತೆಯ ಸ್ವರೂಪದಲ್ಲಿ ತಲ್ಲೀನನಾಗುತ್ತಾನೆ. ಏಕಾಗ್ರತೆಯ ಈ ಉಪಾಸನೆಯಿಂದ ಭಕ್ತನ ಎಲ್ಲ ಇಚ್ಛೆಗಳು ಪೂರ್ಣವಾಗುತ್ತದೆ. ಈ ಪೂಜೆ ಮಾಡುವುದರಿಂದ ಜಾತಕದಲ್ಲಿನ ದೋಷ ನಿವಾರಣೆಯಾಗುತ್ತದೆ ಮಕ್ಕಳ ಭಯ ದೂರವಾಗುತ್ತದೆ ಹಾಗೂ ಮಕ್ಕಳು ವಿದ್ಯಾಭ್ಯಾಸದಲ್ಲಿ ಹಿಂದೆ ಇದ್ದರೆ, ಬುದ್ಧಿ ಮತ್ತೆ ಹೆಚ್ಚಿ ಓದಿ ಬರೆಯಲು ಆಸಕ್ತಿ ಹುಟ್ಟುತ್ತದೆ. ಮರ್ತ್ಯಲೋಕದಲ್ಲಿ ಸಾಧಕನಿಗೆ ಪರಮ ಶಾಂತಿ ಸುಖ ಸಿಗುತ್ತದೆ ಮೋಕ್ಷದ ಬಾಗಿಲು ತಾನಾಗೆ ತೆಗೆಯುತ್ತದೆ. ಬವ ಸಾಗರದ ದುಃಖದಿಂದ ಮುಕ್ತನಾಗಿ ಮೋಕ್ಷವನ್ನು ಸುಲಭವಾಗಿ ಪಡೆಯಲು ಇದಕ್ಕಿಂತ ಉತ್ತಮ ಮಾರ್ಗ ಬೇರೆ ಇಲ್ಲ.‌

ಯಾ ದೇವಿ ಸರ್ವಭೂತೇಷು ವಿಷ್ಣು ಮಾಯೇತಿ ಶಬ್ದಿತಾ
ನಮಸ್ತಸ್ಯೆ ನಮಸ್ತಸ್ಯೆ ನಮಸ್ತಸ್ಯೆ ನಮೋ ನಮಃ !!
ಯಾ ದೇವಿ ಸರ್ವ ಭೂತೇಷು ಶಾಂತಿ ರೂಪೇಣ ಸಂಸ್ಥಿತಾ
ನಮಸ್ತಸ್ಯೆ ನಮಸ್ತಸ್ಯೆ ನಮಸ್ತಸ್ಯೆ ನಮೋ ನಮಃ!!

Address

Bangalore

Website

Alerts

Be the first to know and let us send you an email when ಶ್ರೀ ಓಂ ಮಂತ್ರ posts news and promotions. Your email address will not be used for any other purpose, and you can unsubscribe at any time.

Contact The Practice

Send a message to ಶ್ರೀ ಓಂ ಮಂತ್ರ:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram